ಶುಕ್ರವಾರ, ಡಿಸೆಂಬರ್ 22, 2023

ಮಲೆನಾಡು ಗಿಡ್ಡ ತಳಿಗಳು ಈ ನೆಲದ ಅಸ್ಮಿತೆ:ಡಾ.ಸಿ.ರಮೇಶ್


ಕೊಟ್ಟಿಗೆಹಾರ:ಮಲೆನಾಡು ಗಿಡ್ಡ ತಳಿಗಳು ಈ ನೆಲದ ಅಸ್ಮಿತೆಯಾಗಿದ್ದು ಅವುಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಮೂಡಿಗೆರೆ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ಹೇಳಿದರು.
ಮೂಡಿಗೆರೆ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಮತ್ತು ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ಜನ್ನಾಪುರದ ಪಶು ಚಿಕಿತ್ಸಾಲಯದ ಆವರಣದಲ್ಲಿ ನಡೆದ ಕರು ಮತ್ತು ಹಸುಗಳ ಪ್ರದರ್ಶನ ಹಾಗೂ ಬರಡುರಾಸು ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಲೆನಾಡು ಗಿಡ್ಡ ಕರ್ನಾಟಕದ ವಿಶಿಷ್ಟ ಜಾನುವಾರು ತಳಿಯಾಗಿದೆ. ಮಲೆನಾಡು ಗಿಡ್ಡ ತಳಿಗಳ ಮಹತ್ವವನ್ನು ಅರಿತು ಇದರ ಅಭಿವೃದ್ದಿಗೆ ಮುಂದಾಗಬೇಕಿದೆ.  ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಪಲಾನುಭವಿಗಳು ಪಡೆದುಕೊಳ್ಳಬೇಕಿದೆ ಎಂದರು.
ಗೋಣಿಬೀಡಿನ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಮಾತನಾಡಿ, ಸಾಕುಪ್ರಾಣಿಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವಿನ ಅವಿನಾಭಾವ ಸಂಬಂಧ ಪದಗಳಿಗೆ ನಿಲುಕಲಾರದು. ಸಾಕುಪ್ರಾಣಿಗಳ ಆರೋಗ್ಯ ಸಂರಕ್ಷಣೆ, ಆಹಾರ ಮುಂತಾದವುಗಳ ಮಾಹಿತಿ ಹಾಗೂ ಚಿಕಿತ್ಸೆಯನ್ನು ನೀಡುವುದರ ಮೂಲಕ ಕಾರ್ಯ ನಿರ್ವಹಿಸುವ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಜೊತೆಗೆ ನಿಕಟ ಸಂಪರ್ಕವನ್ನು ಪ್ರಾಣಿಪ್ರಿಯರು ಇಟ್ಟುಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶ್ವಾನಗಳಿಗೆ ರೇಬಿಸ್ ಉಚಿತ ಲಸಿಕೆಯನ್ನು ಹಾಕಲಾಯಿತು.
 ಆಯ್ದ ರಾಸುಗಳ ವಾರಸುದಾರರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ.ಮನು, ಡಾ.ಅಶೋಕ್, ಜಾನುವಾರು ಅಭಿವೃದ್ದಿ ಅಧಿಕಾರಿ ಪದ್ಮೇಗೌಡ, ಜಾನುವಾರು ಅಧಿಕಾರಿ ನವೀನ್, ಜಾನುವಾರು ಅಧಿಕಾರಿ ನವೀನ್, ಪಶುಸಖಿಯರು, ರೋಟರಿ ಸಂಸ್ಥೆಯ ಕಾರ್ಯದರ್ಶಿ ನಯನಕುಮಾರ್, ಪೂರ್ವಾಧ್ಯಕ್ಷರಾದ ರತನ್, ಶೈಲೇಶ್, ಜಗದೀಶ್, ಚಿನ್ನಿಗ ಗ್ರಾ.ಪಂ ಅಧ್ಯಕ್ಷೆ ಲಕ್ಷಿö್ಮ, ಮಾಜಿ ಅಯಕ್ಷ ಸುನೀಲ್, ಸದಸ್ಯರಾದ ಪ್ರಹ್ಲಾದ್, ಭಾಗ್ಯ, ಸಲ್ಮಾ ಮುಂತಾದವರು ಇದ್ದರು.

ಭಾನುವಾರ, ನವೆಂಬರ್ 5, 2023

ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ಭಾರತಿಬೈಲ್ ನ ರಾಜೇಶ್ ಬಿ.ಆರ್ ಗೆ ಪ್ರಥಮ ಸ್ಥಾನ

ಕೊಟ್ಟಿಗೆಹಾರ:ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ೪೪ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ನಡೆದ  ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ  ಮೂಡಿಗೆರೆ ತಾಲ್ಲೂಕಿನ  ಭಾರತಿಬೈಲ್‌ನ ರಾಜೇಶ್ ಬಿ ಆರ್ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಸಿ ಪಿ ಸಿ ಪಾಲಿಟೆಕ್ನಿಕ್ ಮೈಸೂರು, ಇವರ ವತಿಯಿಂದ ನಡೆದ  ೪೪ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ  ಮೂಡಿಗೆರೆ ತಾಲ್ಲೂಕಿನ  ಭಾರತಿಬೈಲ್‌ನ ರಾಜೇಶ್ ಬಿ ಆರ್ ಮತ್ತು ಉಡುಪಿಯ ದರ್ಶನ್ ಸಿ ಅಂಬಲ್ಪಡಿ ಭಾಗವಹಿಸಿದ್ದು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಪಾಲಿಟೆಕ್ನಿಕ್ ಉಡುಪಿ ಕಾಲೇಜಿನ ಪ್ರಾಂಶುಪಾಲರಾದ ಉಮಾ ಬಿ ಮತ್ತು ಕ್ರೀಡಾ ಯೋಜನಾಧಿಕಾರಿಳಾದ ಮಧು ಎಂಜಿ ಇದ್ದರು. ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್‌ನ ರಾಜೇಶ್ ಬಿ ಆರ್, ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮೊ ವ್ಯಾಸಂಗ ಮಾಡುತ್ತಿದ್ದಾರೆ. ರಾಜೇಶ್ ಬಿ.ಆರ್ ಭಾರತಿಬೈಲ್‌ನ ರಾಮಚಂದ್ರ ಮತ್ತು ಸರೋಜ ದಂಪತಿಗಳ ಪುತ್ರ.
ಇದೇ ಕ್ರೀಡಾಕೂಟದಲ್ಲಿ  ಸರ್ಕಾರಿ ಪಾಲಿಟೆಕ್ನಿಕ್ ಉಡುಪಿ ಕಾಲೇಜಿನ ವಿದ್ಯಾರ್ಥಿಗಳಾದ .ಸಾಕ್ಷಿತ್ ದೇವಾಡಿಗ ಕಾಪು ಉಡುಪಿ, ಸುಚಿತ್ ಕುಂದಾಪುರ, ಕಾರ್ತಿಕ್ ಶೆಟ್ಟಿಗಾರ್, ಸಂದೀಪ್ ಎಚ್ ಎಂ, ಶ್ರೀ ಜಿ ಆಚಾರ್ಯ ಕುಂದಾಪುರ, ಸನಾತ್ ಆಚಾರ್ಯ ಕಾಪು, ವಿನಯ್ ಕುಮಾರ್, ಆದಿತ್ಯ ಉಡುಪಿ ವಾಲಿಬಾಲ್ ಪಂದ್ಯದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬುಧವಾರ, ನವೆಂಬರ್ 1, 2023

ಡಾ.ಎಚ್.ಎಸ್. ಸತ್ಯನಾರಾಯಣ ಅವರಿಗೆ ಕುವೆಂಪು ಸಾಹಿತ್ಯ ಪರಿಚಾರ ಪ್ರಶಸ್ತಿ

ಕೊಟ್ಟಿಗೆಹಾರ:ಸಿಎಂಜಿ ಪ್ರತಿಷ್ಠಾನದಿಂದ ೨೦೨೩ನೇ ಸಾಲಿನ ಕುವೆಂಪು ಸಾಹಿತ್ಯ ಪರಿಚಾರಕ ಪ್ರಶಸ್ತಿ ಪುರಸ್ಕಾರಕ್ಕೆ ವಿಮರ್ಶಕ ಹಾಗೂ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯೂ ೫೦ ಸಾವಿರ ನಗದು, ಸ್ಮರಣಿಕೆ ಫಲ ತಾಂಬೂಲಗಳನ್ನು ಒಳಗೊಂಡಿದ್ದು ಡಿಸೆಂಬರ್ ೨೯ ರಂದು ಶಿರಾದಲ್ಲಿ ನಡೆಯುವ ವಿಶ್ವಮಾನವ ದಿನದಂದು ಪ್ರಶಸ್ತಿ ಪ್ರಧಾನಗೊಳ್ಳಲಿದೆ. 
ಡಾ.ಎಚ್.ಎಸ್. ಸತ್ಯನಾರಾಯಣ ಅವರು ಹೊಸ ತಲೆಮಾರಿನ ಓದುಗರಿಗಾಗಿ ಕುವೆಂಪು ಅಲಕ್ಷಿತರೆದೆಯ  ದೀಪ ಎಂಬ ಕೃತಿಯನ್ನು ರಚಿಸಿದ್ದು ಹಲವಾರು ಸಂಪಾದಿತ ಕೃತಿಗಳು ಇವರ ಲೇಖನಿಯಿಂದ ಮೂಡಿ ಬಂದಿದೆ. ಅಪೂರ್ವ ಒಡನಾಟ, ಅಕ್ಷರ ಲೋಕದ ಆನೆ, ನುಡಿಚಿತ್ರ, ಕಣ್ಣೋಟ, ಪನ್ನೇರಳೆ ಇವರ ಪ್ರಕಟಿತ ಕೃತಿಗಳಾಗಿವೆ. 

ಶುಕ್ರವಾರ, ಅಕ್ಟೋಬರ್ 27, 2023

ಬಿಡಾಡಿ ದನಗಳ ಹಾವಳಿ ತಡೆಗೆ ಸಮಿತಿ ರಚನೆ


ತರುವೆ ಗ್ರಾ.ಪಂ ಆವರಣದಲ್ಲಿ ನಡೆದ ಬಿಡಾಡಿ ದನಗಳ ಸಮಸ್ಯೆಯ ಕುರಿತು ನಡೆದ ಸಭೆ


ಕೊಟ್ಟಿಗೆಹಾರ:ಕೊಟ್ಟಿಗೆಹಾರ ಭಾಗದಲ್ಲಿ ಬಿಡಾಡಿ ದನಗಳ ಹಾವಳಿ ತಡೆಗೆ ಜಾನುವಾರುಗಳ ಕ್ಷೇಮಾಭಿವೃದ್ದಿ ಸಮಿತಿ ರಚನೆ ಮಾಡಲಾಗುವುದು ಎಂದು ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ಹೇಳಿದರು.
ತರುವೆ ಗ್ರಾ.ಪಂ ಆವರಣದಲ್ಲಿ ನಡೆದ ಬಿಡಾಡಿ ದನಗಳ ಸಮಸ್ಯೆಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾನುವಾರುಗಳ ಕ್ಷೇಮಾಭಿವೃದ್ದಿ ಸಮಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇರಲಿದ್ದು  ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇರಲಿದ್ದಾರೆ. ಸಮಿತಿಯೂ ಬಿಡಾಡಿ ದನಗಳ ಹಾವಳಿ ತಡೆ ಸೇರಿದಂತೇ ಜಾನುವಾರುಗಳ ಕ್ಷೇಮಾಭಿವೃದ್ದಿಗೆ ಕಾರ್ಯ ನಿರ್ವಹಿಸಲಿದೆ.  
 ಕೊಟ್ಟಿಗೆಹಾರ ಭಾಗದಲ್ಲಿ ಶೇ ೯೫ ರಷ್ಟು ವಾರಸುದಾರರು ಇರುವ ಬಿಡಾಡಿ ದನಗಳೇ ಹೆಚ್ಚಾಗಿದೆ. ಮೊದಲ ಹಂತವಾಗಿ ಬಿಡಾಡಿ ದನಗಳ ವಾರಸುದಾರರ ಮಾಹಿತಿಯನ್ನು ಪಶುಪಾಲನಾ, ಪಶುವೈದ್ಯ  ಸೇವಾ ಇಲಾಖೆಯಿಂದ ಕಲೆ ಹಾಕಲಾಗುವುದು.
 ಆ ನಂತರದಲ್ಲಿ ತರುವೆ ಗ್ರಾ.ಪಂ ವತಿಯಿಂದ ಧ್ವನಿ ವರ್ದಕದ ಮೂಲಕ ಬಿಡಾಡಿ ದನಗಳ ವಾರಸುದಾರರಿಗೆ ತಮ್ಮ ಜಾನುವಾರುಗಳನ್ನು ಎಲ್ಲೆಂದರಲ್ಲಿ ಬಿಡದಂತೇ ಸೂಚಿಸಲಾಗುವುದು. 
ಆ ನಂತರವೂ ಕೂಡ ಜಾನುವಾರುಗಳನ್ನು ಬೀದಿಗೆ ಬಿಟ್ಟರೇ ಸಮಿತಿಯ ಮೂಲಕ ದೊಡ್ಡಿಗೆ ಬಿಡಲಾಗುವುದು. ಸೂಕ್ತ ಸ್ಥಳದಲ್ಲಿ ಗೋಮಾಳ ನಿರ್ಮಿಸಿ ಮೇವು, ನೀರಿನ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ತರುವೆ ಗ್ರಾ.ಪಂಯ ದೊಡ್ಡಿಯು ಶಿಥಿಲಾವಸ್ಥೆ ತಲುಪಿದ್ದು ನಾಳೆಯಿಂದಲ್ಲೇ ದೊಡ್ಡಿಯ ದುರಸ್ತಿ ಕಾರ್ಯ ನಡೆಯಲಿದೆ  ಎಂದರು.
ಬಿಡಾಡಿ ದನಗಳಿಂದ ಅಪಘಾತ ಸಂಭವಿಸುತ್ತಿರುವ ಬಗ್ಗೆ ಮತ್ತು ವಾರಸುದಾರರು ಬಿಡಾಡಿ ದನಗಳನ್ನು ಬಿಡುತ್ತಿರುವುದರಿಂದ ಆಗುತ್ತಿರುವ ತೊಂದರೆಯ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಅಧಿಕಾರಿಗಳ  ಗಮನ ಸೆಳೆದರು. ಬಿಡಾಡಿ ದನಗಳನ್ನು ಎಲ್ಲೆಂದರಲ್ಲಿ ಬಿಡುವ ಜಾನುವಾರುಗಳ ವಾರಸುದಾರರಿಗೆ ದಂಡ ವಿಧಿಸಬೇಕು. ಮಲೆನಾಡು ಗಿಡ್ಡ ತಳಿಯ ಗೋವುಗಳು ಇಲ್ಲೆ ಹೆಚ್ಚಿದ್ದು ಇವುಗಳ ಸಂರಕ್ಷಣೆ ಮಾಡಬೇಕಿದೆ. ವಾಹನ ಡಿಕ್ಕಿಯಾಗಿ ಜಾನುವಾರುಗಳು ಗಾಯಗೊಂಡಾಗ ಪರಿಹಾರಕ್ಕಾಗಿ ಬರುವ ಜಾನುವಾರಿನ ವಾರಸುದಾರರು ವಾಹನ ಡಿಕ್ಕಿಯಾಗಿ ಜಾನುವಾರುಗಳು ಮೃತ ಪಟ್ಟಾಗ ಬರುವುದಿಲ್ಲ. ರಾತ್ರಿ ಸಮಯದಲ್ಲಿ ಹೆದ್ದಾರಿಯಲ್ಲಿ ಮಲಗುವ ಜಾನುವಾರುಗಳಿಂದ ಅಪಘಾತ ಸಂಭವಿಸುವುದು ಹೆಚ್ಚಾಗಿದ್ದು ಜಾನುವಾರುಗಳಿಗೆ ಪ್ರತಿಫಲಕಗಳನ್ನು ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸಭೆಯ ನಂತರ ಶಿಥಿಲಾವಸ್ಥೆ ತಲುಪಿದ ಜಾನುವಾರು ದೊಡ್ಡಿಯ ಸ್ಥಳಕ್ಕೆ  ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತರುವೆ ಗ್ರಾ.ಪಂ ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಸ್ವರೂಪ, ರಘು, ಸುಶೀಲಾ, ಪಿಡಿಓ ಮಹೇಶ್, ಲೆಕ್ಕ ಸಹಾಯಕರಾದ ಉಮಾ, ಸಿಬ್ಬಂದಿಗಳಾದ ಪ್ರವೀಣ್, ಕಾವ್ಯ, ಮಾಧವ, ವಿಠಲ, ಸಂದೀಪ್,  ಪಶು ವೈದ್ಯಾಧಿಕಾರಿ ಡಾ.ಮನು, ನಿವೃತ್ತ ಜಾನುವಾರು ಅಭಿವೃದ್ದಿ ಅಧಿಕಾರಿ ಲಿಯೋ ಸುದೇಶ್, ಜಾನುವಾರು ಅಭಿವೃದ್ದಿ ಅಧಿಕಾರಿ ಪದ್ಮೇಗೌಡ, ಜಾನುವಾರು ಅಧಿಕಾರಿ ನವೀನ್, ಗ್ರಾಮಸ್ಥರಾದ ಸಂಜಯಗೌಡ ಕೊಟ್ಟಿಗೆಹಾರ, ಗಜೇಂದ್ರ, ಪ್ರಭಾಕರ್ ಬಿನ್ನಡಿ, ಆರೀಪ್ ಬಣಕಲ್, ಸಾಗರ್ ತರುವೆ, ತನು ಕೊಟ್ಟಿಗೆಹಾರ, ಆದರ್ಶ ತರುವೆ, ದೀಕ್ಷಿತ್, ಹಸೈನಾರ್, ವಿಜೇಂದ್ರ, ಪ್ರಶಾಂತ್, ರಾಜು, ವಿಕ್ರಂ, ಗೋಪಾಲ್, ಸಂದೀಪ್ ಮುಂತಾದವರು ಇದ್ದರು.

ಭಾನುವಾರ, ಸೆಪ್ಟೆಂಬರ್ 17, 2023

ಸಹಕಾರಿ ಸಂಸ್ಥೆಗಳಿಂದ ಸಾಮಾಜಿಕ ಬದಲಾವಣೆ

ಕೊಟ್ಟಿಗೆಹಾರ:ಸಹಕಾರಿ ಸಂಸ್ಥೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ sಸ್ಥಾಪಕ ಅಧ್ಯಕ್ಷರಾದ ಅಶ್ವಿನ್ ಬಿ.ಕೆ ಹೇಳಿದರು.
ಬಣಕಲ್‌ನಲ್ಲಿ ನಡೆದ ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಸಹಕಾರ ಸಂಸ್ಥೆಗಳು ಬಡವರು, ಕಾರ್ಮಿಕರು, ಸಾಮಾನ್ಯ ಜನರು ಆರ್ಥಿಕವಾಗಿ ಸಬಲರಾಗಲೂ ಪ್ರಮುಖ ಪಾತ್ರ ವಹಿಸಿವೆ. ಈ ಭಾಗದ ಜನರ ಆರ್ಥಿಕ ಏಳಿಗೆಗೆ ಸಹಕಾರ ಸಂಘಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘವು ಪ್ರಗತಿಯತ್ತ ಸಾಗುತ್ತಿದ್ದು ಎಲ್ಲಾ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷರಾದ ಎಂ.ಎಸ್.ಕಾರ್ತೀಕ್, ನಿರ್ದೇಶಕರಾದ ಡಿ.ಕೆ ಸತೀಶ್, ಆದರ್ಶ್, ರಘು, ಶಶಾಂಕ್, ಗಾನವಿ, ಕವಿತ, ಪ್ರಿಯಾಂಕ, ಮಹೇಂದ್ರ, ಮುಖ್ಯ ಕಾರ್ಯ ನಿರ್ವಾಹಕರಾದ ಶ್ವೇತಾ, ಸದಸ್ಯರಾದ ಎನ್.ಟಿ ದಿನೇಶ್, ಸಿಬ್ಬಂದಿಗಳಾದ ರಶ್ಮಿ, ನಿಶ್ಮಿತಾ ಇದ್ದರು.

ಶುಕ್ರವಾರ, ಜುಲೈ 28, 2023

ಭಾನುವಾರ (ಜುಲೈ 30) ಕೊಟ್ಟಿಗೆಹಾರ (ಅತ್ತಿಗೆರೆ)ಯಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ

   ಕೊಟ್ಟಿಗೆಹಾರ: ಚಿಕ್ಕಮಗಳೂರಿನ ಸ್ವಾಭಿಮಾನಿ ಪತ್ರಕರ್ತರ ಜನಪರ ವೇದಿಕೆ 'ಪಬ್ಲಿಕ್ ಇಂಪಾಕ್ಟ್ ' ಖಾಸಗಿ ವಾಹಿನಿ  ವತಿಯಿಂದ ಕೊಟ್ಟಿಗೆಹಾರದ ಅತ್ತಿಗೆರೆಯ ಎ.ಎಸ್.ಅಶ್ವತ್ಥ್ ಅವರ ಗದ್ದೆಯಲ್ಲಿ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಏರ್ಪಡಿಸಲಾಗಿದೆ.
ಪುರುಷರ ಹಗ್ಗಜಗ್ಗಾಟ ಪ್ರಥಮ 10ಸಾವಿರ,ದ್ವಿತೀಯ 5ಸಾವಿರ, ತೃತೀಯ 3ಸಾವಿರ ಹಾಗೂ  ಮಹಿಳೆಯರ ಹಗ್ಗಜಗ್ಗಾಟ ಪ್ರಥಮ ಕ್ರಮವಾಗಿ 10ಸಾವಿರ,5ಸಾವಿರ, 3ಸಾವಿರ ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ  ಕ್ರಮವಾಗಿ 5ಸಾವಿರ,3ಸಾವಿರ,2ಸಾವಿರ ಮತ್ತು  ಮಹಿಳೆಯರ ಥ್ರೋಬಾಲ್ 5ಸಾವಿರ,3ಸಾವಿರ ಹಾಗೂ 2 ಸಾವಿರ.ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ 1ಸಾವಿರ, 500ಹಾಗೂ ತೃತೀಯ 300ರೂ ಬಹುಮಾನ ನೀಡಲಾಗುವುದು.ಆಸಕ್ತರು ಮೊಬೈಲ್ ಸಂಖ್ಯೆ  9148055429/9916917520 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರಾದ ಪ್ರಶಾಂತ್ ಮೂಡಿಗೆರೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸೋಮವಾರ, ಜುಲೈ 10, 2023

ನೂತನ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ.ರಮೇಶ್ ಸಿ ನೇಮಕ

ಕೊಟ್ಟಿಗೆಹಾರ:ಮೂಡಿಗೆರೆ ಪಶು ಆಸ್ಪತ್ರೆಯ ನೂತನ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ. ರಮೇಶ್ ಸಿ ನೇಮಕಗೊಂಡಿದ್ದಾರೆ. 
ಈ ಹಿಂದೆ ಚಿಕ್ಕಮಗಳೂರು ತಾಲ್ಲೂಕಿನ ಕೆಳಗೂರು ಪಶು ಚಿಕಿತ್ಸಾಲಯದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಗಳಾಗಿದ್ದ ಡಾ. ರಮೇಶ್ ಸಿ ಅವರನ್ನು ಮೂಡಿಗೆರೆ ಪಶು ಆಸ್ಪತ್ರೆಗೆ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೆಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಮೂಡಿಗೆರೆ ಪಶು ಆಸ್ಪತ್ರೆಯಲ್ಲಿ ಪ್ರಭಾರ ಮುಖ್ಯ ಪಶು ವೈದ್ಯಾಧಿಕಾರಿಯಾಗಿದ್ದ ಡಾ.ಮನು ಅವರಿಂದ  ಡಾ. ರಮೇಶ್ ಸಿ ಅವರು ಅಧಿಕಾರ ಸ್ವೀಕರಿಸಿದರು. 

ಸೋಮವಾರ, ಮೇ 1, 2023

ತಾಯಿಯ ಅನುಭವ, ನನ್ನ ಕ್ರಿಯಾಶೀಲತೆಯೊಂದಿಗೆ ಕ್ಷೇತ್ರದ ಅಭಿವೃದ್ದಿಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹೇಳಿಕೆ


ಈ ಹಿಂದೆ ಸಚಿವೆಯಾಗಿ, ಕ್ಷೇತ್ರದ ಶಾಸಕಿಯಾಗಿ  ಜನರ ಸೇವೆ ಮಾಡಿದ್ದ ತಾಯಿ ಮೋಟಮ್ಮ ಅವರ ರಾಜಕೀಯ ಅನುಭವ ಮತ್ತು ನನ್ನ ಕ್ರೀಯಾಶೀಲತೆಯೊಂದಿಗೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲು ಕಂಕಣಬದ್ದವಾಗಿದ್ದು ಈ ಬಾರಿ ಮತದಾರರು ಕೈ ಹಿಡಿಯಲಿದ್ದಾರೆ ಎಂದು ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹೇಳಿದರು.
ಸೋಮವಾರ, ಬಣಕಲ್, ಕೊಟ್ಟಿಗೆಹಾರ, ಸಬ್ಬೇನಹಳ್ಳಿ, ಬಂಕೇನಹಳ್ಳಿ, ಚಕ್ಕಮಕ್ಕಿ ಮುಂತಾದ ಕಡೆಗಳಲ್ಲಿ ಮತಯಾಚನೆ ವೇಳೆ ಕೊಟ್ಟಿಗೆಹಾರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಜನರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಅನುಗುಣವಾಗಿ ಸಂಪನ್ಮೂಲವನ್ನು ಕ್ರೋಡಿಕರಿಸಿ ಫಲಾನುಭವಿಗಳಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದಲ್ಲಿ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ನನ್ನ ಮೊದಲ ಕೆಲಸವಾಗಿದೆ. ಮಲೆನಾಡು ಭಾಗದಲ್ಲಿ ಹಲವು ರೈತರ ಸಮಸ್ಯೆಗಳಿದ್ಧು ಅದನ್ನು ಕಾರ್ಯರೂಪಕ್ಕೆ ತರುತ್ತೇನೆ. ಪ್ರತಿಯೊಂದು ಗ್ರಾಮದ  ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತರುವೆ ಗ್ರಾ.ಪಂ ಅಧ್ಯಕ್ಷ ಸತೀಶ್ ಮಾತನಾಡಿ, ಮಾಜಿ ಸಚಿವೆ ಮೋಟಮ್ಮನವರ ಜನಪರ ಕಾರ್ಯಗಳನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ತರುವೆ ಗ್ರಾ.ಪಂಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಂದರೇಶ್‌ಗೌಡ, ಸಬ್ಲಿ ದೇವರಾಜ್,  ಟಿ.ಎ.ಖಾದರ್, ಇರ್ಪಾನ್, ರಾಮಚಂದ್ರೆಗೌಡ, ಸುಬ್ರಹ್ಮಣ್ಯ, ದಿಲ್‌ದಾರ್ ಬೇಗಂ, ಅಜೀಜ್, ಮನು, ಇರ್ಪಾನ್, ಮಹೇಶ್, ಕುಮಾರ್ ಮುಂತಾದವರು ಇದ್ದರು.

ಶೋಷಿತ, ಬಡವರ್ಗದ ಧ್ವನಿಯಾಗಿ ಸಿಪಿಐ ಕಾರ್ಯ ನಿರ್ವಹಣೆ: ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಹೇಳಿಕೆ


ಕೊಟ್ಟಿಗೆಹಾರ:ಹಿಂದಿನಿಂದಲೂ ಶೋಷಿತ ಬಡವರ್ಗದ ಧ್ವನಿಯಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಸಿಪಿಐ ಪಕ್ಷವನ್ನು ಮತದಾರರು ಬೆಂಬಲಿಸಲ್ಲಿದ್ದಾರೆ ಎಂದು ಮೂಡಿಗೆರೆಯ ಸಿಪಿಐ ಪಕ್ಷದ ಅಭ್ಯರ್ಥಿ ರಮೇಶ್ ಕೆಳಗೂರು ಹೇಳಿದರು.
ಕೊಟ್ಟಿಗೆಹಾರದಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸನ ಸಭೆಗೆ ಆಯ್ಕೆಯಾದರೇ ಮೂಡಿಗೆರೆ ಕ್ಷೇತ್ರದ ಎಲ್ಲಾ ಅರ್ಹ ನಿವೇಶನ ಮತ್ತು ವಸತಿ ರಹಿತರಿಗೆ ನಿವೇಶನ ಮತ್ತು ವಸತಿ ಕಲ್ಪಿಸುವುದು ಸರ್ಕಾರಿ ಆಸ್ಪತ್ರೆಯನ್ನು ಉನ್ನತೀಕರಿಸಿ ಎಲ್ಲಾ ಬಡವರಿಗೂ ಕೈಗೆಟುಕುವ  ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದು ಮೊದಲ ಆದ್ಯೆತೆಯಾಗಿದೆ ಎಂದರು.
ಹಲವಾರು ದಶಕಗಳಿಂದ  ಸಿಪಿಐ ಪಕ್ಷ ನೊಂದವರ ಪರವಾಗಿ ಹೋರಾಟ ರೂಪಿಸುತ್ತ ಬಂದಿದೆ. ಮೂಡಿಗೆರೆ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ, ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ, ಕಾಫಿ ಉದ್ಯಮದ ಉನ್ನತಿಗೆ, ತೋಟ ಕಾರ್ಮಿಕರ ಶ್ರೇಯೋಭಿವೃದ್ದಿಗೆ, ಅಸಂಘಟಿತ ಕಾರ್ಮಿಕರ ಹಿತ ಕಾಯಲು, ದಲಿತ, ಹಿಂದುಳಿದ,ಅಲ್ಪಸಂಖ್ಯಾತ, ಮಹಿಳೆಯರ ಬದುಕನ್ನು ಹಸನು ಮಾಡಲು ಸಿಪಿಐ ಕಂಕಣಬದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಮುಖಂಡರಾದ ರಾಜು ಬಾನಳ್ಳಿ, ಅವಿನ್ ಕೊಟ್ಟಿಗೆಹಾರ, ಶಂಕರ್, ವಸಮತ್, ಸುಂದರ್ ಬಾಳೂರು, ರಿ, ರಾಜು, ಲಕ್ಷ್ಮಿ, ಗುಲಾಬಿ, ಯಮುನಾ ಮುಂತಾದವರು ಇದ್ದರು.

ಭಾನುವಾರ, ಏಪ್ರಿಲ್ 30, 2023

ಗ್ರಾಮದ ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ:ನಯನ ಮೋಟಮ್ಮ

ಕೊಟ್ಟಿಗೆಹಾರ: ಕಾಂಗ್ರೆಸ್ ರಾಷ್ಟ್ರೀಯ ಪಕ್ಷಕ್ಕೆ ಬಹು ದೊಡ್ಡ ಇತಿಹಾಸವಿದೆ.ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್.ದೇಶ ಕಟ್ಟಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಬಾಳೂರು ಹೋಬಳಿಯ ಬಾಳೂರು,ಜಾವಳಿ,ಕೂವೆ,ಕಲ್ಮನೆ,ಮಾಳಿಂಗನಾಡು,ಗಬ್ಗಲ್, ನಿಡುವಾಳೆ,ಸುಂಕಸಾಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಪರ ಮತಯಾಚನೆ ಮಾಡಿ ಮಾತನಾಡಿದರು.
ಮತದಾರರಿಗೆ ಸರಿಯಾಗಿ ವಿಮರ್ಶೆ ಮಾಡಿ ಮತದಾನ ಮಾಡಲು ಕಾಲಾವಕಾಶವಿದೆ.ರಸ್ತೆಗಳನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ ಮೋದಿಯವರಲ್ಲ.ನಂತರ ಅವರ ಕಾಲದಲ್ಲಿ ಡಾಂಬರೀಕರಣ ಆಗಿರಬಹುದು.ಹಿರಿಯ ನಾಯಕಿ ಮೋಟಮ್ಮ ಮೂಡಿಗೆರೆ ಕ್ಷೇತ್ರದಲ್ಲಿ ಮೂರು ಬಾರಿ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದಲ್ಲಿ ಸಾಕಷ್ಟು ಗರಿಷ್ಟ ಕೆಲಸವನ್ನು ಮಾಡಿದ್ದಾರೆ.ಅವರ ಪುತ್ರಿ ನಯನಾ ಕೂಡ ಶಿಕ್ಷಿತರಾಗಿದ್ದು  ಕ್ಷೇತ್ರವನ್ನು ಅಬಿವೃದ್ಧಿ ಪಥದಲ್ಲಿ ಸಾಗಿಸುತ್ತಾರೆ ಎಂಬ ಆತ್ಮ ವಿಶ್ವಾಸವಿದೆ.ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದರ ಮೂಲಕ ನಯನಾ ಅವರಿಗೆ ಜನ ಸೇವೆ ಮಾಡಲು ಅವಕಾಶ ನೀಡಬೇಕೆಂದು ವಿನಂತಿಸಿದರು.
ಅಭ್ಯರ್ಥಿ ನಯನಾ ಮೋಟಮ್ಮ ಮಾತನಾಡಿ ' ಜನರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಅನುಗುಣವಾಗಿ ಸಂಪನ್ಮೂಲವನ್ನು ಕ್ರೂಢಿಕರಿಸಿ ಫಲಾನುಭವಿಗಳಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯವಾಗಿದೆ.ಕ್ಷೇತ್ರದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದಲ್ಲಿ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ನನ್ನ ಮೊದಲ ಕೆಲಸವಾಗಿದೆ.ಪ್ರತಿಯೊಂದು ಗ್ರಾಮದ  ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.
ಈ ಸಂದರ್ಭದಲ್ಲಿ ಬಾಳೂರು ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ  ಶ್ರೀನಾಥ್,ಜಿಲ್ಲಾ ವಕ್ತಾರ ಪ್ರಸನ್ನ ಮರಗುಂದ,ಮುಖಂಡರಾದ ಜಿ.ಎಚ್.ಹಾಲಪ್ಪ ಗೌಡ,ಸಬ್ಲಿ ದೇವರಾಜ್,ರವಿ ವಾಟೇಖಾನ್,ಕೆ.ಸಿ.ಮಹೇಂದ್ರ,ಉಪೇಂದ್ರ,ಲಾರೆನ್ಸ್ ಡಿಸೋಜ, ಮಹೇಶ್ ಬಾಳೂರು,ರಿಯಾಜ್, ಜಮೀರ್,ಚಂದ್ರಶೇಖರ್,ಎನ್.ಎಂ.ರವಿ,ಚಂದ್ರು ಕೂವೆ,ಲಕ್ಷ್ಮಣ್,ಮೋಹನ್ ಪಟೇಲ್,ನವೀನ್,ಸಂಜೀವ,ಸ್ವಾಮಿ ಮರ್ಕಲ್  ಮತ್ತಿತರರು ಇದ್ದರು

ಭಾನುವಾರ, ಏಪ್ರಿಲ್ 16, 2023

ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕೊಟ್ಟಿಗೆಹಾರ:ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಇಟ್ಟುಕೊಳ್ಳಲು ಸಾಮಾಜಿಕ ಕಾರ್ಯಗಳು ವೇದಿಕೆಯಾಗಿವೆ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.
ಬಣಕಲ್ ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ವಿಷು ಹಬ್ಬದ ಪ್ರಯುಕ್ತ ಮೂಡಿಗೆರೆ ಎಂಜಿಎಂ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆರೋಗ್ಯಪೂರ್ಣ ಸ್ವಸ್ಥ ಹಾಗೂ ಸದೃಡ ಸಮುದಾಯವನ್ನಾಗಿ ರೂಪಿಸುವುದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ  ಸಂಘದ ಉದ್ದೇಶವಾಗಿದೆ. ಸಮುದಾಯದ ಸರ್ವಾಂಗೀಣ ಅಭಿವೃದ್ದಿಯ ಸಂಘದ ಮೂಲ ಮಂತ್ರವಾಗಿದೆ. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು, ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಂಘಟಿಸುವುದರ ಜೊತೆಗೆ ಸಮುದಾಯದ ಸಬಲೀಕರಣಕ್ಕೆ ಶ್ರಮಿಸುವ ಉದ್ದೇಶವನ್ನು  ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವು ಹೊಂದಿದೆ ಎಂದರು.
ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂಭವಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆಸ್ಪತ್ರೆಯ ಹಿರಿಯ ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಅವರ ಸೇವಾಮನೋಭಾವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಮೂಡಿಗೆರೆ ಎಂಜಿಎಂ ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂಭವಿ, ಶುಶ್ರೂಷಕಿಯರಾದ ವೇದಾವತಿ, ವನಿತಾಕುಮಾರಿ, ಆಸ್ಪತ್ರೆಯ ಸಿಬ್ಬಂದಿಗಳಾದ ನಾಗೇಶ್, ಪ್ರಮೀಳಮ್ಮ, ಜಮೀಲಾಭಾನು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪದಾಧಿಕಾರಿಗಳು, ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ಮಂಗಳವಾರ, ಏಪ್ರಿಲ್ 11, 2023

ಲೇಖಕ ಧನಂಜಯ ಜೀವಾಳ ಅವರ ಪುಸ್ತಕಗಳ ಬಿಡುಗಡೆ

ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಕೃತಿ ಗ್ರಾಮಾಯಣ

ಲೇಖಕ ಧನಂಜಯ ಜೀವಾಳ ಅವರ ಪುಸ್ತಕಗಳ ಬಿಡುಗಡೆ
ಕೊಟ್ಟಿಗೆಹಾರ:ಗ್ರಾಮಾಯಣ ಕೃತಿಯಲ್ಲಿ ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ. ಮಲೆನಾಡಿನ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಈ ಕೃತಿಯಲ್ಲಿ ದಾಖಲಾಗಿದೆ ಎಂದು ಮೈಸೂರಿನ ನಿವೃತ್ತ ಪ್ರಾಂಶುಪಾಲರಾದ ಡಾ.ಭದ್ರಪ್ಪ ಹೇಳಿದರು.

ಬಿದರಹಳ್ಳಿಯಲ್ಲಿ ನಡೆದ ಲೇಖಕ ಧನಂಜಯ ಜೀವಾಳ ಅವರ ಗ್ರಾಮಾಯಣ ಭಾಗ ೧ ಮತ್ತು ೨ ಪುಸ್ತಕ ಹಾಗೂ ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ ಎಂಬ ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವಾನುಭವದ ಸಹಜವಾದ ಸ್ಪಂದನ ಈ ಕೃತಿಯಲ್ಲಿ ಅಕ್ಷರಗಳಾಗಿವೆ. ಮರ‍್ನಾಲ್ಕು ಕಾದಂಬರಿಗಳಿಗಾಗುವಷ್ಟು ವಸ್ತು ವಿಷಯಗಳು ಈ ಕೃತಿಯಲ್ಲಿವೆ. ಗತಿಸಿ ಹೋದ ಮಲೆನಾಡಿನ ಜನಜೀವನ ಸಂಸ್ಕೃತಿಯನ್ನು ದಾಖಲಿಸುವ ಕಾರ್ಯ ಅತ್ಯಂತ ಅಗತ್ಯವಾಗಿ ಆಗಬೇಕಿದೆ. ಆಯಾ ಭಾಗದ ಪ್ರಾದೇಶಿಕ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಲೇಖಕರು ಹಾಗೂ ವಿಮರ್ಶಕರಾದ ಡಾ.ಎಚ್.ಎಸ್. ಸತ್ಯನಾರಾಯಣ ಮಾತನಾಡಿ, ಧನಂಜಯ ಜೀವಾಳ ಅವರು ಗ್ರಾಮಾಯಣ ಕೃತಿಯ ಮೂಲಕ ಮಲೆನಾಡಿನ ಹಿನ್ನಲೆಯ ಗ್ರಾಮ ಭಾರತವನ್ನು ಕಟ್ಟಿಕೊಟ್ಟಿದ್ದಾರೆ. ಗ್ರಾಮ ಸಂಸ್ಕೃತಿಯ ವಿವರಗಳು ಈ ಕೃತಿಯಲ್ಲಿ ದಟ್ಟವಾಗಿದೆ.  ಎಂದರು.
ಲೇಖಕರು ಹಾಗೂ ಸಂಶೋದಕರಾದ  ಪ್ರದೀಪ್ ಕೆಂಜಿಗೆ ಮಾತನಾಡಿ ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕಬೇಕಿದೆ. ಆಡಿಯೋ ಪುಸ್ತಕಗಳು  ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಆಡಿಯೋ ಪುಸ್ತಕಗಳು ಕೂಡ ಪರಿಣಾಮಕಾರಿಯಾಗಿ ಕೇಳುವ ವರ್ಗವನ್ನು ತಲುಪುತ್ತವೆ ಎಂದರು.
ಹಿರಿಯ ಜಾನಪದ ತಜ್ಞರಾದ ಕಾಳೇಗೌಡ ನಾಗವಾರ ಮಾತನಾಡಿದರು.
ಈ ಸಂದರ್ಭದಲ್ಲಿ ಲೇಖಕ ಧನಂಜಯ ಜೀವಾಳ, ಧ್ವನಿ ಕಲಾವಿದರಾದ ಎನ್. ಲೀಲಾವತಿ, ಭಾಗ್ಯ, ವನಜ ಸುರೇಶ್, ಡಾ.ಯತೀಶ್ವರ್, ಮಮತ, ಸಾಹಿತಿಗಳಾದ ಹಳೆಕೋಟೆ ರಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಕಸಾಪ ಪದಾಧಿಕಾರಿಗಳಾದ ಮಗ್ಗಲಮಕ್ಕಿ ಗಣೇಶ್, ಪ್ರಕಾಶ್, ಎಂ.ಎಸ್ ನಾಗರಾಜ್, ಪ್ರಸನ್ನ ಗೌಡಹಳ್ಳಿ, ಮಂಜುನಾಥ್ ಸ್ವಾಮಿ, ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.