ಗುರುವಾರ, ಜುಲೈ 21, 2022

ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಸಮಾಜ ಸೇವಕ

ಕೊಟ್ಟಿಗೆಹಾರ:ನಿಡುವಾಳೆ ಸಮೀಪದ ಕಲ್ಮನೆಯ ಸಮಜ ಸೇವಕರಾದ ಎಚ್.ಮಂಜುನಾಥ್ ಅವರು ಹೃದಯ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸಮಾಜ ಸೇವಕರಾದ ಎಚ್.ಮಂಜುನಾಥ್ ಅವರಿಗೆ ೨೦೨೧ ರ ಡಿಸೆಂಬರ್ ೨೪ ರಂದು ಎದೆನೋವು ಕಾಣಿಸಿಕೊಂಡಿದ್ದು ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜೂನ್ ತಿಂಗಳಲ್ಲಿ ಮತ್ತೆ ಎದೆ ನೋವು ಕಾಣಿಸಿಕೊಂಡಿದ್ದು ಸುರತ್ಕಲ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ವಿವಿಧ ಔಷಧಿಗಳನ್ನು ನೀಡಿದ್ದು ರಕ್ಷ ಪರೀಕ್ಷೆ ಮುಂತಾದ ಪರೀಕ್ಷೆಗಳನ್ನು ಮಾಡಿದ್ದಾರೆ. ಹೃದಯದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ತಿಳಿಸಿದ್ದಾರೆ. ಚಿಕಿತ್ಸೆಯ ಭಾಗವಾಗಿ ವಿವಿಧ ರೀತಿಯ ಪರೀಕ್ಷೆ ಹಾಗೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿದ್ದು ಇದಕ್ಕೆ ಲಕ್ಷಾಂತರ ರೂ ಹಣದ ಅಗತ್ಯವಿದೆ.
ಮಂಜುನಾಥ್ ಅವರಿಗೆ ಇಬ್ಬರು ಮಕ್ಕಳಿದ್ದು ಮಗ ೮ ನೇ ತರಗತಿ ಹಾಗೂ ಮಗಳು ೧೦ ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.  ಮಂಜುನಾಥ್ ಅವರ ಪತ್ನಿ ಕಲ್ಮನೆಯ ಅಂಗನವಾಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕಡು ಕಷ್ಟದಲ್ಲಿರುವ ಮಂಜುನಾಥ್ ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದ್ದು ಮಂಜುನಾಥ್ ಅವರ ಚಿಕಿತ್ಸೆಗೆ ನೆರವು ನೀಡುವವರು ಮಂಜುನಾಥ್ ಅವರ ಕೆನರಾ ಬ್ಯಾಂಕಿನ ಮೂಡಿಗೆರೆ ಶಾಖೆಯ ಖಾತೆ ಸಂಖ್ಯೆ:೧೧೬೨೧೦೧೦೦೫೭೫೨. ಐಎಪ್‌ಎಸ್‌ಸಿ ಸಂಖ್ಯೆ ಸಿಎನ್‌ಆರ್‌ಬಿ೦೦೦೧೧೪೨ ಹಣ ಸಂದಾಯ ಮಾಡಬಹುದು. ಮಂಜುನಾಥ್ ಅವರ ಮೊಬೈಲ್ ಸಂಖ್ಯೆ:೯೬೦೬೬೯೮೯೫೮.

ಸ್ಥಳೀಯತೆಯಿಂದ ವಿಶ್ವಮಾತ್ಮಕ ನೆಲೆಗೆ ಸಾಗಿದ ತೇಜಸ್ವಿ ಸಾಹಿತ್ಯ

ಅಜ್ಜಂಪುರ:ತೇಜಸ್ವಿ ಅವರು ಸ್ಥಳೀಯತೆಯಿಂದ ವಿಶ್ವಮಾತ್ಮಕ ನೆಲೆಗೆ ತಮ್ಮ ಸಾಹಿತ್ಯವನ್ನು ಕೊಂಡೊಯ್ದವರು ಎಂದು ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ಅಜ್ಜಂಪುರದಲ್ಲಿ ನಡೆದ ತೇಜಸ್ವಿ ಸಾಹಿತ್ಯ ಯಾನ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ೨೫ ವರ್ಷಗಳ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ತೇಜಸ್ವಿಯವರು ದೊಡ್ಡ ಆಕರ್ಷನೆಯ ಶಕ್ತಿಯಾಗಿ ಸೂಜಿಗಲ್ಲಿನ ಹಾಗೇ ಓದುಗರನ್ನು ಆಕರ್ಷಿಸಿದ್ದಾರೆ. ಹಾಗೆಯೇ ಯುವ ತಲೆಮಾರನ್ನು ಪ್ರಭಾವಿಸಿದ್ದಾರೆ. ತೇಜಸ್ವಿ ಸಾಹಿತ್ಯ ಪ್ರಭಾವದಿಂದಾಗಿ ಹೊಸ ಓದುಗ ವರ್ಗ ಸೃಷ್ಟಿಯಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ.ಸಿ.ರಮೇಶ್ ಮಾತನಾಡಿ, ತೇಜಸ್ವಿ ಅವರ ಬದುಕು ಬರಹ ಚಿಂತನೆಗಳನ್ನು ಯುವಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಮೂಡಿಸಲು ತೇಜಸ್ವಿ ಸಾಹಿತ್ಯ ಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜಣ್ಣ ಕೆ ಮಾತನಾಡಿ, ಯುವಪೀಳಿಗೆ ಸಾಹಿತ್ಯದತ್ತ ಮುಖ ಮಾಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿವೆ. ಕನ್ನಡ ಸಾಹಿತ್ಯದ ಸಮೃದ್ದತೆಯ ಅರಿವನ್ನು ಯುವ ಪೀಳಿಗೆಯಲ್ಲಿ ಮೂಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಮಹಾಲಿಂಗಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಆನಂದ ಆರ್, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಾರದ ಡಾ.ಆನಂದ ಎನ್.ಎಲ್,  ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದನ್ ಕುಪ್ಪಳ್ಳಿ, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್, ಯುವ ಸಾಹಿತಿಗಳಾದ ಪೃಥ್ವಿ ಸೂರಿ, ದರ್ಶನ್, ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಇದ್ದರು.