ಶುಕ್ರವಾರ, ಜುಲೈ 5, 2024

ಕಲಾವಿದರು ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಿ

 ಅಜ್ಜಂಪುರ;ಕಲೆ ಸಂಸ್ಕೃತಿಯ ಉಳಿವಿಗೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಕಲಾವಿದರು ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಹೇಳಿದರು.
ಶ್ರೀ ಮಾರುತಿ ವೀರಗಾಸೆ ಕಲಾ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಜ್ಜಂಪುರದಲ್ಲಿ ನಡೆದ ಚರ್ಮ ವಾದ್ಯಗಳಾದ ವೀರಗಾಸೆ ಡೊಳ್ಳು ಹಾಗೂ ಪುಟ್ಟಿ ಮೇಳದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಳಿವಿನಂಚಿನಲ್ಲಿರುವ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯ ನಿರ್ವಹಿಸುತ್ತಾ ಬಂದಿದೆ. ವೀರಗಾಸೆ ಡೊಳ್ಳು ಹಾಗೂ ಪುಟ್ಟಿ ಮೇಳದಂತಹ ಕಲಾಪ್ರಕಾರಗಳು ಮುಂದಿನ ತಲೆಮಾರಿಗೂ ತಲುಪಬೇಕಿದೆ ಎಂದರು.

ಜಾನಪದ ಕಲಾವಿದೆ ಮುಗಳಿ ಲಕ್ಷ್ಮಿ ದೇವಮ್ಮ ಮಾತನಾಡಿ ಮೂಲ ಜಾನಪದ ಕಲಾ ವಾದ್ಯಗಳನ್ನು ರಕ್ಷಿಸಿಕೊಂಡು ಹೋದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.

ರಾಜ್ಯಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿ ಪಡೆದಂತಹ ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಹೆಚ್ ಎಸ್ ಪವಿತ್ರ ರಾಣಿ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾರುತಿ ಎಚ್ ಪಿ ಸಂಜು, ಗೆಳೆಯರ ಬಳಗ ರಂಗತಂಡ ಅಧ್ಯಕ್ಷರಾದ ಎಸಿ ಚಂದ್ರಪ್ಪ, ಲಕ್ಷ್ಮಿ, ಎಂಆರ್ ಬಸಪ್ಪ, ರಂಗಕರ್ಮಿ ಕೃಷ್ಣಮೂರ್ತಿ, ಕಸಾಪ ಅಧ್ಯಕ್ಷರಾದ ಎಚ್.ಆರ್ ಚಂದ್ರಪ್ಪ ರಂಗಕರ್ಮಿಗಳಾದ ಮೋಹನ್ ರಾವ್ ವಿಜಯ ಕುಮಾರಿ, ಟಿ ಸಿ ಶಿವಕುಮಾರ್, ರಂಗ ಕಲಾವಿದ ನವೀನ್ ಕುಮಾರ್, ಕಾರ್ಯಕ್ರಮದ ಮುಖ್ಯ ಕಾರ್ಯದರ್ಶಿ ರವಿ, ಶಿಕ್ಷಕ ಸುರೇಂದ್ರ ನಾಯಕ್ ಡಿ ಇದ್ದರು