ಶುಕ್ರವಾರ, ಜುಲೈ 24, 2026

ಜಾನಪದದಿಂದ ಭಾರತೀಯ ಸಂಸ್ಕೃತಿ ಜೀವಂತ. ಸಾಹಿತಿ ಹಳೆಕೋಟೆ ರಮೇಶ್ ಅಭಿಮತ


ಕೊಟ್ಟಿಗೆಹಾರ:ಜಾನಪದದಿಂದ ಭಾರತೀಯ ಸಂಸ್ಕೃತಿ ಜೀವಂತವಾಗಿದ್ದು  ಜನಪದ ಸಮಾಜದ ಅಂಕುಡೊಂಕು ಗಳನ್ನು  ತಿದ್ದುವುದಲ್ಲದೆ ಸ್ವಾಸ್ಥ್ಯ  ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಾಹಿತಿ ಹಳೇಕೋಟೆ ರಮೇಶ್ ಹೇಳಿದರು.
ಮೂಡಿಗೆರೆ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ವತಿಯಿಂದ ಹೊರಟ್ಟಿ ಗ್ರಾಮದ ಕನ್ನಡ ಹೋರಾಟಗಾರರಾದ ಹೊರಟ್ಟಿ ರಘು ಅವರ ಮನೆಯಂಗಳದಲ್ಲಿ ನಡೆದ ಜಾನಪದ ಜಗುಲಿ-ಮನೆಯಂಗಳದಿ  ಜಾನಪದರ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಕ ವರ್ಗ ಮತ್ತು ಮಹಿಳೆಯರಿಂದ ಜಾನಪದ ಕಲೆ, ಸಾಹಿತ್ಯ, ಸಂಗೀತ ಸಮೃದ್ದವಾಗಿ ಬೆಳೆದು  ಬಂದಿದೆ. ಇಂದಿನ ಯುವಕ ಯುವತಿಯರು ಅವುಗಳನ್ನು ಪೋಷಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಮಾತನಾಡಿ ಭಾರತೀಯ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಗೆ ಜಾನಪದ ಸಂಸ್ಕೃತಿಯ ಕೊಡುಗೆ ಅಪಾರ. ಎಲ್ಲಾ ರೀತಿಯ ಕಲೆಗಳಿಗೆ ಜಾನಪದವೇ ತಾಯಿ ಬೇರು. ಜಾನಪದಕ್ಕೆ ನೈತಿಕ ಮತ್ತು ಜಾತ್ಯತೀತ ಮನೋಭಾವನೆಯನ್ನು ಬೆಳೆಸುವ ಶಕ್ತಿ ಇದೆ. ಇದು ಮನಸ್ಸಿಗೆ ಶಾಂತಿ ಮತ್ತು ಮನರಂಜನೆಯನ್ನು ನೀಡುವುದಲ್ಲದೆ ಮನುಷ್ಯನಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದರು.

ಪತ್ರಕರ್ತರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಕನ್ನಡ ಮತ್ತು ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಕನ್ನಡಪರ ಹೋರಾಟಗಾರ ಹೊರಟ್ಟಿ ರಘು ರವರ ಸೇವೆ ಅಪಾರ. ಕನ್ನಡವನ್ನು ಜೀವಂತವಾಗಿಡಲು ಅವರ ವಾಹನಗಳಿಗೆ ಕನ್ನಡ ಬಾವುಟವನ್ನು ಕಟ್ಟಿ ಎಲ್ಲೆಡೆ ಸಂಚರಿಸುವ ಮೂಲಕ ಕನ್ನಡಾಭಿಮಾನವನ್ನು ಪಸರಿಸುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಜಾನಪದ ಕಲೆ ಸಾಹಿತ್ಯ ಸಂಗೀತವನ್ನು ತಳಮಟ್ಟದಲ್ಲಿ ಸಂಘಟಿಸಲು ಸಕ್ರಿಯವಾಗಿ ಕರ್ನಾಟಕ ಜಾನಪದ ಪರಿಷತ್ತು  ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ  ವಿಚಾರವಾಗಿದೆ ಎಂದರು.
ಕನ್ನಡ ಪರ ಹೋರಾಟಗಾರ ಹೊರಟ್ಟಿ ರಘು  ಮಾತನಾಡಿ ಇಂದಿನ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಜಾನಪದ ಕಲೆ ಸಾಹಿತ್ಯ ಸಂಗೀತ ಜೀವಂತವಾಗಿ ಉಳಿದಿದೆ. ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯ ಬೇಕಾದರೆ ಪ್ರತಿ  ಕುಟುಂಬದ ಹಿರಿಯರು ಅವರ ಮಕ್ಕಳಿಗೆ ಅದರ ಜ್ಞಾನ ಮತ್ತು ಉಪಯೋಗವನ್ನು ಹೇಳಿ  ಕೊಡಬೇಕಾಗಿದೆ ಎಂದರು.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನವೀನ್, ಸಾಹಿತಿ ಎಂ.ಎಸ್ ನಾಗರಾಜ್, ಕರ್ನಾಟಕ ಜಾನಪದ ಪರಿಷತ್ತು ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಕುನ್ನಳ್ಳಿ ರವಿ, ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣಗೌಡ, ಉಪಾಧ್ಯಕ್ಷ ಚಂದ್ರೇಗೌಡ, ಗೌರವಾಧ್ಯಕ್ಷ ಸುಬ್ರಹ್ಮಣ್ಯ, ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಲಕ್ಷ್ಮಣ್ ಗೌಡ ಕಸಾಪ ಮಾಜಿ ಅಧ್ಯಕ್ಷ ಶಾಂತಕುಮಾರ್, ದೀಪಿಕಾ, ಕೋಮರಾಜು, ಚಂದ್ರೇಶ, ಲೋಕೇಶ್ ಮುಂತಾದವರು ಇದ್ದರು.

ಗುರುವಾರ, ಜುಲೈ 16, 2026

ಚೆಸ್ ಕ್ರೀಡಾಕೂಟದಲ್ಲಿ ಸುವಿಧ್ ಪಿ ಪ್ರಥಮ

ಕೊಟ್ಟಿಗೆಹಾರ:ವಲಯ ಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ಬಣಕಲ್‌ನ ನಜರೆತ್ ಶಾಲೆಯ ವಿದ್ಯಾರ್ಥಿ ಸುವಿಧ್ ಪಿ ಪ್ರಥಮ ಸ್ಥಾನ ಪಡೆದಿದ್ದಾನೆ.

 ಉಡುಪಿ ಜಿಲ್ಲೆಯ ಶಿರೂರಿನ ಗ್ರೀನ್ ವ್ಯಾಲಿ ಶಾಲೆಯಲ್ಲಿ ನಡೆದ ೭ ಜಿಲ್ಲೆಗಳನ್ನೊಳಗೊಂಡ ೧೪ರ ವಯೋಮಾನದ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ಸುವಿಧ್, ಶಿಕ್ಷಕ ಹಾಗೂ ಲೇಖಕ ಪೂರ್ಣೇಶ್ ಮತ್ತಾವರ ಮತ್ತು ಶಿಕ್ಷಕಿ ರೇಖಾಪೂರ್ಣೇಶ್ ದಂಪತಿಗಳ ಪುತ್ರ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ


ಕೊಟ್ಟಿಗೆಹಾರ:ತಲೆಯೊಳಗೆ ಗೆಡ್ಡೆಯಾಗಿ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಗಬ್ಗಲ್ ಗ್ರಾಮದ ಕುಟುಂಬವೊಂದು ದಾನಿಗಳಿಂದ ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿದೆ.
ಗಬ್ಗಲ್ ಗ್ರಾಮದ ಬಡಕುಟುಂಬದ ಗುಲಾಬಿ ಎಂಬುವವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಕುಟುಂಬ ಚಿಕಿತ್ಸೆಗೆ ಹಣವಿಲ್ಲದೇ ಸಾಲ ಮಾಡಿ ಗುಲಾಬಿ ಅವರಿಗೆ ಚಿಕಿತ್ಸೆಗೆ ಕೊಡಿಸುತ್ತಿದ್ದು ಮುಂದಿನ ಚಿಕಿತ್ಸೆಗೆ ಹಣವಿಲ್ಲದೇ ಕೈ ಚೆಲ್ಲಿ ಕುಳಿತಿದೆ.

ಗುಲಾಬಿ ಅವರಿಗೆ ಕೆಲ ವರ್ಷದಿಂದ ಮಾತು ತೊದಲುವುದು, ನಡೆಯಲು ಸಾಧ್ಯವಾಗದೇ ಇರುವುದು, ಕಿವಿ ಕೇಳಿಸದೇ ಇರುವುದು, ದೃಷ್ಠಿ ಮಂಜಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದು ಬಾಳೆಹೊನ್ನೂರು, ಮಾಗುಂಡಿ ಮುಂತಾದ ಸ್ಥಳೀಯ ಆಸ್ಪತ್ರೆಗೆ ತೋರಿಸಿದ್ದಾರೆ. ಆದರೂ ಕೂಡ ರೋಗ ಕಡಿಮೆಯಾಗದೇ ಇರುವುದರಿಂದ ಶಿವಮೊಗ್ಗ ಮತ್ತು ಪಡೀಲಿನ ಆಸ್ಪತ್ರೆಗೆ ಹೋದಾಗ ಪರಿಶೀಲಿಸಿದ ವೈದ್ಯರು, ಎಡ ಕಿವಿ ಸ್ವಲ್ಪ ಮೇಲೆ ತಲೆಯ ಒಳಭಾಗದಲ್ಲಿ ಗೆಡ್ಡೆ ಇದ್ದು ಶಸ್ತçಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಸುಮಾರು 3 ಲಕ್ಷ ವೆಚ್ಚವಾಗಲಿದ್ದು ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವಂತಾಗಿದೆ,
ಗುಲಾಬಿ ಅವರ ಗಂಡ ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುಲಾಬಿ ಅವರಿಗೆ 8ನೇ ತರಗತಿ ಓದುವ ಮಗ ಮತ್ತು 6ನೇ ತರಗತಿ ಓದುವ ಮಗಳಿದ್ದಾಳೆ. ಗುಲಾಬಿ ಅವರ ತಾಯಿ ಹಾಗೂ ಅವರ ಕುಟುಂಬದವರು ಗುಲಾಬಿ ಅವರನ್ನು ನೋಡಿಕೊಳ್ಳುತ್ತಿದ್ದು ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ನೆರವು ನೀಡುವ ದಾನಿಗಳು ಗುಲಾಬಿ ಅವರ ಕರ್ನಾಟಕ ಬ್ಯಾಂಕ್ ನ ಬಾಳೆಹೊನ್ನೂರು ಶಾಖೆಯ ಖಾತೆ ಸಂಖ್ಯೆ:5382500100803601, ಐಎಫ್‌ಎಸ್‌ಸಿ ಕೋಡ್:ಕೆಎಆರ್‌ಬಿ0000052ಗೆ ಹಣ ಸಂದಾಯ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 7338628023 ಸಂಖ್ಯೆಗೆ ಸಂರ್ಪಕಿಸಬಹುದಾಗಿದೆ.