ಶುಕ್ರವಾರ, ಅಕ್ಟೋಬರ್ 27, 2023

ಬಿಡಾಡಿ ದನಗಳ ಹಾವಳಿ ತಡೆಗೆ ಸಮಿತಿ ರಚನೆ


ತರುವೆ ಗ್ರಾ.ಪಂ ಆವರಣದಲ್ಲಿ ನಡೆದ ಬಿಡಾಡಿ ದನಗಳ ಸಮಸ್ಯೆಯ ಕುರಿತು ನಡೆದ ಸಭೆ


ಕೊಟ್ಟಿಗೆಹಾರ:ಕೊಟ್ಟಿಗೆಹಾರ ಭಾಗದಲ್ಲಿ ಬಿಡಾಡಿ ದನಗಳ ಹಾವಳಿ ತಡೆಗೆ ಜಾನುವಾರುಗಳ ಕ್ಷೇಮಾಭಿವೃದ್ದಿ ಸಮಿತಿ ರಚನೆ ಮಾಡಲಾಗುವುದು ಎಂದು ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ಹೇಳಿದರು.
ತರುವೆ ಗ್ರಾ.ಪಂ ಆವರಣದಲ್ಲಿ ನಡೆದ ಬಿಡಾಡಿ ದನಗಳ ಸಮಸ್ಯೆಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾನುವಾರುಗಳ ಕ್ಷೇಮಾಭಿವೃದ್ದಿ ಸಮಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇರಲಿದ್ದು  ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇರಲಿದ್ದಾರೆ. ಸಮಿತಿಯೂ ಬಿಡಾಡಿ ದನಗಳ ಹಾವಳಿ ತಡೆ ಸೇರಿದಂತೇ ಜಾನುವಾರುಗಳ ಕ್ಷೇಮಾಭಿವೃದ್ದಿಗೆ ಕಾರ್ಯ ನಿರ್ವಹಿಸಲಿದೆ.  
 ಕೊಟ್ಟಿಗೆಹಾರ ಭಾಗದಲ್ಲಿ ಶೇ ೯೫ ರಷ್ಟು ವಾರಸುದಾರರು ಇರುವ ಬಿಡಾಡಿ ದನಗಳೇ ಹೆಚ್ಚಾಗಿದೆ. ಮೊದಲ ಹಂತವಾಗಿ ಬಿಡಾಡಿ ದನಗಳ ವಾರಸುದಾರರ ಮಾಹಿತಿಯನ್ನು ಪಶುಪಾಲನಾ, ಪಶುವೈದ್ಯ  ಸೇವಾ ಇಲಾಖೆಯಿಂದ ಕಲೆ ಹಾಕಲಾಗುವುದು.
 ಆ ನಂತರದಲ್ಲಿ ತರುವೆ ಗ್ರಾ.ಪಂ ವತಿಯಿಂದ ಧ್ವನಿ ವರ್ದಕದ ಮೂಲಕ ಬಿಡಾಡಿ ದನಗಳ ವಾರಸುದಾರರಿಗೆ ತಮ್ಮ ಜಾನುವಾರುಗಳನ್ನು ಎಲ್ಲೆಂದರಲ್ಲಿ ಬಿಡದಂತೇ ಸೂಚಿಸಲಾಗುವುದು. 
ಆ ನಂತರವೂ ಕೂಡ ಜಾನುವಾರುಗಳನ್ನು ಬೀದಿಗೆ ಬಿಟ್ಟರೇ ಸಮಿತಿಯ ಮೂಲಕ ದೊಡ್ಡಿಗೆ ಬಿಡಲಾಗುವುದು. ಸೂಕ್ತ ಸ್ಥಳದಲ್ಲಿ ಗೋಮಾಳ ನಿರ್ಮಿಸಿ ಮೇವು, ನೀರಿನ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ತರುವೆ ಗ್ರಾ.ಪಂಯ ದೊಡ್ಡಿಯು ಶಿಥಿಲಾವಸ್ಥೆ ತಲುಪಿದ್ದು ನಾಳೆಯಿಂದಲ್ಲೇ ದೊಡ್ಡಿಯ ದುರಸ್ತಿ ಕಾರ್ಯ ನಡೆಯಲಿದೆ  ಎಂದರು.
ಬಿಡಾಡಿ ದನಗಳಿಂದ ಅಪಘಾತ ಸಂಭವಿಸುತ್ತಿರುವ ಬಗ್ಗೆ ಮತ್ತು ವಾರಸುದಾರರು ಬಿಡಾಡಿ ದನಗಳನ್ನು ಬಿಡುತ್ತಿರುವುದರಿಂದ ಆಗುತ್ತಿರುವ ತೊಂದರೆಯ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಅಧಿಕಾರಿಗಳ  ಗಮನ ಸೆಳೆದರು. ಬಿಡಾಡಿ ದನಗಳನ್ನು ಎಲ್ಲೆಂದರಲ್ಲಿ ಬಿಡುವ ಜಾನುವಾರುಗಳ ವಾರಸುದಾರರಿಗೆ ದಂಡ ವಿಧಿಸಬೇಕು. ಮಲೆನಾಡು ಗಿಡ್ಡ ತಳಿಯ ಗೋವುಗಳು ಇಲ್ಲೆ ಹೆಚ್ಚಿದ್ದು ಇವುಗಳ ಸಂರಕ್ಷಣೆ ಮಾಡಬೇಕಿದೆ. ವಾಹನ ಡಿಕ್ಕಿಯಾಗಿ ಜಾನುವಾರುಗಳು ಗಾಯಗೊಂಡಾಗ ಪರಿಹಾರಕ್ಕಾಗಿ ಬರುವ ಜಾನುವಾರಿನ ವಾರಸುದಾರರು ವಾಹನ ಡಿಕ್ಕಿಯಾಗಿ ಜಾನುವಾರುಗಳು ಮೃತ ಪಟ್ಟಾಗ ಬರುವುದಿಲ್ಲ. ರಾತ್ರಿ ಸಮಯದಲ್ಲಿ ಹೆದ್ದಾರಿಯಲ್ಲಿ ಮಲಗುವ ಜಾನುವಾರುಗಳಿಂದ ಅಪಘಾತ ಸಂಭವಿಸುವುದು ಹೆಚ್ಚಾಗಿದ್ದು ಜಾನುವಾರುಗಳಿಗೆ ಪ್ರತಿಫಲಕಗಳನ್ನು ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸಭೆಯ ನಂತರ ಶಿಥಿಲಾವಸ್ಥೆ ತಲುಪಿದ ಜಾನುವಾರು ದೊಡ್ಡಿಯ ಸ್ಥಳಕ್ಕೆ  ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತರುವೆ ಗ್ರಾ.ಪಂ ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಸ್ವರೂಪ, ರಘು, ಸುಶೀಲಾ, ಪಿಡಿಓ ಮಹೇಶ್, ಲೆಕ್ಕ ಸಹಾಯಕರಾದ ಉಮಾ, ಸಿಬ್ಬಂದಿಗಳಾದ ಪ್ರವೀಣ್, ಕಾವ್ಯ, ಮಾಧವ, ವಿಠಲ, ಸಂದೀಪ್,  ಪಶು ವೈದ್ಯಾಧಿಕಾರಿ ಡಾ.ಮನು, ನಿವೃತ್ತ ಜಾನುವಾರು ಅಭಿವೃದ್ದಿ ಅಧಿಕಾರಿ ಲಿಯೋ ಸುದೇಶ್, ಜಾನುವಾರು ಅಭಿವೃದ್ದಿ ಅಧಿಕಾರಿ ಪದ್ಮೇಗೌಡ, ಜಾನುವಾರು ಅಧಿಕಾರಿ ನವೀನ್, ಗ್ರಾಮಸ್ಥರಾದ ಸಂಜಯಗೌಡ ಕೊಟ್ಟಿಗೆಹಾರ, ಗಜೇಂದ್ರ, ಪ್ರಭಾಕರ್ ಬಿನ್ನಡಿ, ಆರೀಪ್ ಬಣಕಲ್, ಸಾಗರ್ ತರುವೆ, ತನು ಕೊಟ್ಟಿಗೆಹಾರ, ಆದರ್ಶ ತರುವೆ, ದೀಕ್ಷಿತ್, ಹಸೈನಾರ್, ವಿಜೇಂದ್ರ, ಪ್ರಶಾಂತ್, ರಾಜು, ವಿಕ್ರಂ, ಗೋಪಾಲ್, ಸಂದೀಪ್ ಮುಂತಾದವರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ