ಬುಧವಾರ, ಜೂನ್ 24, 2026

ಪರಿಸರ ಸಮತೋಲನದಲ್ಲಿ ಮಳೆಕಾಡುಗಳ ಪಾತ್ರ ಅಪಾರ

ಕೊಟ್ಟಿಗೆಹಾರ:ಪರಿಸರ ಸಮತೋಲನದಲ್ಲಿ ಮಳೆಕಾಡುಗಳ ಪಾತ್ರ ಹೊಂದಿದ್ದು ಮಳೆಕಾಡುಗಳ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಹೇಳಿದರು.
ಅರಣ್ಯ ಇಲಾಖೆ ವತಿಯಿಂದ ಕೊಟ್ಟಿಗೆಹಾರದ ಕೆ.ಪಿಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ವಿಶ್ವ ಮಳೆಕಾಡುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿಯಾದ ಮಾನವನ ಹಸ್ತಕ್ಷೇಪ ಹಾಗೂ ಕೈಗಾರೀಕರಣ, ಅಕ್ರಮ ಮರ ಕಡಿತಲೆ ಇತ್ಯಾದಿ ಕಾರಣಗಳಿಂದಾಗಿ ಮಳೆಕಾಡುಗಳು ಅಪಾಯದ ಅಂಚಿನಲ್ಲಿವೆ. ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಮಳೆಕಾಡುಗಳ ಸಂರಕ್ಷಣೆಗೆ ಎಲ್ಲರೂ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.

ಮೂಡಿಗೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆಕರ್ಷ್ ಟಿ.ಎಂ ಮಾತನಾಡಿ, ಮಳೆ ಕಾಡುಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಬೇಕಿದೆ. ಮಳೆಕಾಡುಗಳ ಸಂರಕ್ಷಣೆ ಹಾಗೂ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮುತ್ತೋಡಿ ವಲಯದ ಉಪ ವಲಯ ಅರಣ್ಯಾಧಿಕಾರಿಗಳಾದ ಕುಮಾರ್ ಬಿ ಮಾತನಾಡಿ ಭೂಮಿಯ ಹವಾಮಾನ ನಿಯಂತ್ರಣ, ಆಮ್ಲಜನಕ ಉತ್ಪಾದನೆ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಗೆ ಮಳೆಕಾಡುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಮಳೆ ಕಾಡುಗಳ ಸಂರಕ್ಷಣೆ ಕುರಿತ ಜಾಗೃತಿಗೆ ಮಳೆಕಾಡು ಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಎಟಿಡಬ್ಲೂö್ಯಎಎಸ್ ಸಂಸ್ಥೆಯ ರಿಂಕಲ್ ಲೋಬೊ ಮಾತನಾಡಿ, ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವುದು, ಜೀವವೈವಿಧ್ಯತೆಯನ್ನು ಕಾಪಾಡುವುದು ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಸಸ್ಯಗಳನ್ನು ಉಳಿಸುವುದು ಎಲ್ಲರ ಆದ್ಯತೆ ಆಗಬೇಕು ಎಂದರು.
ಬಣಕಲ್ ಉಪ ವಲಯ ಅರಣ್ಯಾಧಿಕಾದಿ ರಂಜಿತ್ ಪ್ರಾಸ್ತಾವಿಕ ನುಡಿಗಳನಾಡಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ್, ತರುವೆ ಏಕಲವ್ಯ ಮಾದರಿ ವಸತಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು. ಎ.ವಿ ಮನು ಸ್ವಾಗತಿಸಿ, ಆದರ್ಶ್ ವಿ.ಎಸ್ ನಿರೂಪಿಸಿದರು.

ಬುಧವಾರ, ಜೂನ್ 17, 2026

ಚಿನ್ನದ ಪದಕ ಪಡೆದ ಡಾ.ಪೂಜಾ ಬಿ.ಜಿ


ಕೊಟ್ಟಿಗೆಹಾರ:ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ೨೮ನೇ ಘಟಿಕೋತ್ಸವದಲ್ಲಿ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದಲ್ಲಿ ಕೊಟ್ಟಿಗೆಹಾರ ಬಿನ್ನಡಿಯ ಡಾ.ಪೂಜಾ ಬಿ.ಜಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ೨೮ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದರು. 
ಡಾ.ಪೂಜಾ ಅವರು ತರುವೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸುಶೀಲ ಮತ್ತು ಗೋಪಾಲ್ ಬಿನ್ನಡಿ ಅವರ ಪುತ್ರಿ. 

ಗುರುವಾರ, ಜೂನ್ 11, 2026

ಜೂನ್ 13 ರಂದು ಮಾನಸಿಕ ಒತ್ತಡ ನಿರ್ವಹಣೆ ಉಪನ್ಯಾಸ


ಕೊಟ್ಟಿಗೆಹಾರ:ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್‍.ಚಂದ್ರಶೇಖರ್‍ ಅವರು ಜೂನ್ 13 ರಂದು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಕಲಿಕೆಗೆ ಸವಾಲು, ನಿರ್ವಹಣೆ ಮತ್ತು ಪರಿಹಾರ ಈ ವಿಷಯವಾಗಿ ಉಪನ್ಯಾಸ ಮತ್ತು ಸಂವಾದ ನಡೆಸಿಕೊಡಲಿದ್ದಾರೆ ಎಂದು ಚಿಕ್ಕಮಗಳೂರಿನ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ ಶಂಕರ್‍ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಆಧುನಿಕ, ಯಾಂತ್ರಿಕ ವಾತಾವರಣದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯು ಸುಗಮ ಕಲಿಕೆಗೆ ತುಂಬಾ ಮುಖ್ಯ. ಕಲಿಕಾ ಪ್ರಕ್ರಿಯೆಯಲ್ಲಿ ಪಾಲುದಾರರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾನಸಿಕ ಒತ್ತಡ ಸಮಸ್ಯೆಯನ್ನು ಸಮಗ್ರವಾಗಿ ಮತ್ತು ವೈಜ್ಞಾನಿಕವಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ.  ಈ ಹಿನ್ನಲೆಯಲ್ಲಿ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಸಂಸ್ಥೆಯಲ್ಲಿ ಜೂನ್ 13 ರಂದು ಮನೋವೈದ್ಯರಾದ ಡಾ. ಸಿ.ಆರ್‍.ಚಂದ್ರಶೇಖರ್‍ ಅವರು ಮಾತನಾಡಲಿದ್ದಾರೆ ಎಂದರು.

ಈ ಕಾರ್ಯಕ್ರಮದ ಸದುಪಯೋಗವನ್ನು ಶಿಕ್ಷಕರು ಪಡೆದುಕೊಳ್ಳಬಹುದಾಗಿದ್ದು ಪ್ರತಿ ಶಾಲೆಯ ಇಬ್ಬರು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ 9482381758 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.