ಶನಿವಾರ, ಮೇ 21, 2022

ಡೆಂಗ್ಯೂ ಜ್ವರ:ಜಾಗೃತೆ ವಹಿಸಿದರೆ ರೋಗ ತಡೆ ಸಾಧ್ಯ

ಕೊಟ್ಟಿಗೆಹಾರ:ಮುಂಜಾಗೃತೆ ವಹಿಸುವುದರಿಂದ ಡೆಂಗ್ಯೂ ಜ್ವರ ಬಾರದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷ ಅಧಿಕಾರಿ ಶಾಂತ ಹೇಳಿದರು.
ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ  ಸ್ವಸಹಾಯ ಸಂಘಗಳ ಒಕ್ಕೂಟ ಬಣಕಲ್ ವತಿಯಿಂದ ಬಣಕಲ್‌ನಲ್ಲಿ ನಡೆದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಗ ಬಂದ ಮೇಲೆ ಜಾಗೃತರಾಗುವುದಕ್ಕಿಂತ ಪೂರ್ವದಲ್ಲಿ ಅದು ಅಂಟಿಕೊಳ್ಳದAತೆ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ. ಸೊಳ್ಳೆಕಡಿತದಿಂದ ಪಾರಾಗಲು ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಸಿಮೆಂಟ್ ತೊಟ್ಟಿ, ಹಲವಾರು ದಿನಗಳಿಂದ ನೀರಿನಿಂದ  ತುಂಬಿರುವ ಹೂಕುಂಡಗಳಲ್ಲಿನ, ಪ್ಲಾಸ್ಟಿಕ್ ಸೇರಿದಂತೆ ನೀರು ನಿಲ್ಲುವ ವಸ್ತುಗಳನ್ನು ಆಗಾಗ ಸ್ವಚ್ಚಗೊಳಿಸುವುದರಿಂದ ಸೊಳ್ಳೆಯ ಸಂತಾನೋತ್ಪತ್ತಿ ನಿಂತಾAತಾಗಿ ರೋಗ ಹರಡುವುದು ಕಡಿಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಾದ ಸುನೀತ, ಸ್ನೇಯಪ್ರಿಯ, ನಂಬ್ರಿನ್, ವಿಮುಕ್ತಿ ಬಣಕಲ್‌ನ ನಿರ್ದೇಶಕರಾದ ಫಾದರ್ ವಿನ್ಸೆಂಟ್ ಡಿ ಸೋಜಾ, ಕಾರ್ಯಕರ್ತೆ ವಿಂದ್ಯಾ, ಒಕ್ಕೂಟದ ಅಧ್ಯಕ್ಷರಾದ ಯಶೋಧ, ಕಾರ್ಯದರ್ಶಿ ಸಾವಿತ್ರಿ, ಖಜಾಂಚಿ ಸಾವಿತ್ರಿ, ಮಾಜಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ಪ್ರಮೋದಿನಿ, ನೇತ್ರ, ಲಲಿತ, ಪವಿತ್ರ, ಮಂಜುಳಾ, ಬೇಬಿ, ಶಾಲಿನಿ, ಸುನಿತ, ಗೌರಮ್ಮ ಮುಂತಾದವರು ಇದ್ದರು.

ಗುರುವಾರ, ಮೇ 19, 2022

ಮೇ.23 ರಂದು ಮೂಡಿಗೆರೆಯಲ್ಲಿ ಸರಳ ಸಾಮೂಹಿಕ ವಿವಾಹ

ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ, ಮಿತ್ರ ಜಾನಪದ ಕಲಾ ಸಂಘ, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಮತ್ತು ಪೂರ್ಣ ಚಂದ್ರ ತೇಜಸ್ವಿ ಜಾನಪದ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಮೇ.23ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನೋತ್ಸವದ ಅಂಗವಾಗಿ ಸರಳ ಸಾಮೂಹಿಕ ವಿವಾಹ ಮತ್ತು ಮಲೆನಾಡ ಜಾನಪದ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು. 
ಅವರು ಸೋಮವಾರ ಪಟ್ಟಣದಲ್ಲಿ ಮದುವೆಯಾಗುವ 10 ಜೋಡಿ ವದೂವರರಿಗೆ ವಸ್ತ್ರ ವಿತರಿಸಿ ಮಾತನಾಡಿದರು. ಸರಳ ಸಾಮೂಹಿಕ ವಿವಾಹ ಕಳೆದ 20 ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದ್ದು,  ಕೋವಿಡ್ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲ. ಸಾರ್ವಜನಿಕರ ಒತ್ತಾಯದ ಮೇರೆಗೆ ಈ ವರ್ಷವೂ ಮೇ.23ರಂದು ಬೆಳಗ್ಗೆ 11ಗಂಟೆಗೆ ಸರಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಅಲ್ಲದೇ ಮಲೆನಾಡು ಶ್ರೀಮಂತ ಜಾನಪದ ಸಂಸ್ಕೃತಿಯ ತವರೂರು. ಇಲ್ಲಿ ಮದುವೆ, ಹಬ್ಬ, ಕೃಷಿ, ದೇವರ ಪೂಜೆ, ಧಾರ್ಮಿಕ ಆಚರಣೆಗಳೆಲ್ಲವೂ ದೈನಂದಿನ ಜಾನಪದ ಭಾಗವಾಗಿ ಜಾನಪದ ಸೊಗಡಿನಲ್ಲಿ ಬೆಸೆದುಕೊಂಡಿದೆ. ಜಾನಪದ ಸಂಸ್ಕೃತಿಯನ್ನು ಉಳಿಸಲು ಮಲೆನಾಡ ಜಾನಪದ ಸಂಸ್ಕೃತಿ ಉತ್ಸವ ಕೂಡ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಖ್ಯಾತ ಗೀತೆ ರಚನೆಕಾರ ಹಾಗೂ ಚಲನಚಿತ್ರ ನಿರ್ದೇಶಕ ಡಾ.ವಿ.ನಾಗೇಂದ್ರ ಪ್ರಸಾಧ್, ಚಿತ್ರದುರ್ಗದ ಖ್ಯಾತ ವಾಗ್ಮಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಸಿನಿಮಾ ಕಲಾವಿದೆ ಟಿ.ರಾಜೇಶ್ಚರಿ, ಚಲನಚಿತ್ರ ನಟ ಗುರುನಂದನ್ ಆಗಮಿಸಲಿದ್ದಾರೆ. ಸಂಜೆ ೬ ಗಂಟೆಗೆ ಮಲೆನಾಡು ಪ್ರತಿಭೆಗಳಿಂದ ಮಲೆನಾಡಿನ ಪ್ರಸಿದ್ದ ಕಲೆಗಳಾದ ಸುಗ್ಗಿ ಕುಣಿತ, ಕೋಲಾಟ, ಜಾನಪದ ನೃತ್ಯ, ಜಾನಪದ ಗೀತೆ, ಸೋಬಾನೆ ಹಾಡು, ಭತ್ತ ಕುಟ್ಟುವ ಹಾಡು, ನಟ್ಟಿ ಹಾಡು ಸೇರಿದಂತೆ ಇತರೇ ಜಾನಪದ ಸೊಗಡಿನ ಉತ್ಸವ ನಡೆಯಲಿದೆ. ಮದುವೆ ಹಾಗೂ ಜಾನಪದ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು. 
ಪ.ಪಂ. ಸದಸ್ಯರಾದ ಎಚ್.ಪಿ.ರಮೇಶ್, ಹಂಜಾ, ಮಾಜಿ ಜಿ.ಪಂ. ಸದಸ್ಯ ಎಂ.ಎಸ್.ಅನಂತ್ ಮತ್ತಿತರರಿದ್ದರು.

ಶನಿವಾರ, ಜನವರಿ 8, 2022

ತೆರೆದ ಬಾಕ್ಸ್ ಚರಂಡಿಗೆ ಬಿದ್ದ ಜಾನುವಾರು: ಹೆದ್ದಾರಿ ಪ್ರಾಧಿಕಾರದ ವಿರುದ್ದ ಸಾರ್ವಜನಿಕರ ಆಕ್ರೋಶ


ಕೊಟ್ಟಿಗೆಹಾರ:ಹೆದ್ದಾರಿ ಅಗಲೀಕರಣದ ಭಾಗವಾಗಿ‌ ಕೊಟ್ಟಿಗರಹಾರದ ರಸ್ತೆ ಇಬ್ಬದಿಯಲ್ಲಿ ಬಾಕ್ಸ್ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದ್ದು ಕೆಲವೆಡೆ ಬಾಕ್ಸ್ ಚರಂಡಿಯನ್ನು ಮುಚ್ಚದೇ ಇರುವುದರಿಂದ ಜಾನುವಾರೊಂದು ಬಾಕ್ಸ್ ಚರಂಡಿಗೆ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.
ಜಾನುವಾರೊಂದು ಬಾಕ್ಸ್ ಚರಂಡಿಗೆ ಬಿದ್ದು ಹೊರ ಬರಲಾಗದೇ ಒದ್ದಾಡುತ್ತಿದ್ದು ಸ್ಥಳೀಯರು ಹರಸಾಹಸ ಪಟ್ಟು ಜಾನುವಾರನ್ನು ಹೊರ ತೆಗೆದಿದ್ದಾರೆ.
ಬಾಕ್ಸ್ ಚರಂಡಿ ಕಾಮಗಾರಿ‌ ಮುಗಿದು ಹಲವು ಕಾಲವಾದರೂ ಕೂಡ ಕೆಲವೆಡೆ ಬಾಕ್ಸ್ ಚರಂಡಿಗಳನ್ನು ಮುಚ್ಚಿಲ್ಲ. ಇದರಿಂದ ನಾಯಿ, ಹಸು ಮುಂತಾದ ಪ್ರಾಣಿಗಳು ಬಾಕ್ಸ್ ಚರಂಡಿಯೊಳಗೆ ಬೀಳುತ್ತಿದ್ದು ಹೆದ್ದಾರಿ ಪ್ರಾಧಿಕಾರ ಬಾಕ್ಸ್ ಚರಂಡಿಯನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗುರುವಾರ, ಡಿಸೆಂಬರ್ 16, 2021

ಕವಯತ್ರಿ ಸನ್ಮತಿ ಹಾರ್ಮಕ್ಕಿ ಅವರಿಗೆ ಮಾತೃ ವಿಯೋಗ

ಕೊಟ್ಟಿಗೆಹಾರ:ಮೂಡಿಗೆರೆ ತಾಲ್ಲೂಕಿನ ಕವಯತ್ರಿ ಸನ್ಮತಿ ಹಾರ್ಮಕ್ಕಿ ಅವರ ತಾಯಿ  ಹಾರ‍್ಮಕ್ಕಿ ಗ್ರಾಮದ ಶಾರದಮ್ಮ ಅವರು (೬೫) ಬುಧವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಮೂವರು ಪುತ್ರಿ, ಒರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮೃತರ ಖಾಸಗಿ ಜಮೀನಿನಲ್ಲಿ ಗುರುವಾರ ನಡೆಯಿತು.

ಮಂಗಳವಾರ, ಫೆಬ್ರವರಿ 5, 2013

ಶ್ರೀ ಕ್ಷೇತ್ರ ಹೊರನಾಡು ಜಿಲ್ಲೆಯಿಂದ ೧೦೦ ಕಿ.ಮೀ.ಮೂಡಿಗೆರೆ ತಾಲ್ಲೂಕಿನಿಂದ ೨ ಕಿ.ಮೀ ಹೊರನಾಡಿನ ಆದಿದೇವತೆ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯವು ಹೊರನಾಡು ಮೇರುತಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿದೆ. ಪುಟ್ಟ ಗುಡ್ಡದ ಮೇಲಿರುವ ಶ್ರೀ ಆದಿ ಶಕ್ತ್ಯಾತ್ಮಕ ಅನ್ನ ಪೂರ್ಣೇಶ್ವರಿ ದೇವಾಲಯ ಸವಿಸ್ತಾರವಾದುದು. ಅಲ್ಲಿಯ ನಿಸರ್ಗ ರಮಣೀಯ ಪರಿಸರವಿದೆ. ಅಪೂರ್ವವಾದ ಪಶ್ಚಿಮ ಘಟ್ಟಗಳ ತಾಣ ಪ್ರವಾಸಿ ಕೇಂದ್ರವಾಗಿದ್ದು, ಜನಪ್ರಿಯವಾಗಿದೆ. ದೇಶದ ವಿವಿದೆಡೆಯಿಂದ ಭಕ್ತ ಸಮೂಹವನ್ನು ಆಕರ್ಷಿಸಿದೆ. ಹಲವು ಐತಿಹ್ಯಗಳು ಶ್ರೀ ಕ್ಷೇತ್ರವನ್ನು ಪ್ರಭಾವಗೊಳಿಸಿವೆ. ಎಲ್ಲಿ ನೋಡಿದರು ಹಸಿರು ನೀಲಿ ಆಗಸದೆಡೆಗೆ ಚಾಚಿ ನಿಂತ ಗಿರಿ ಶಿಖರ ತರುಲತೆಗಳು ಅವುಗಳ ನಡುವೆ ಮಂಜುಳ ನೀನಾದ ಗೈಯ್ಯುತ್ತಾ ಹರಿದು ಬರುವ ಭದ್ರಾ ನದಿ ಪರಾತ್ಪರ ಚಿಂತನೆಗೆ ಯೋಗ್ಯವಾದ ಪ್ರಶಾಂತ ಸ್ಥಳ. ಅಪರೂಪದ ಜಲಧಾರೆಗಳು ಸುತ್ತಲೂ ದಟ್ಟವಾದ ಕಾಡು, ಕಾಫಿ, ಭತ್ತ, ಅಡಿಕೆ, ಏಲಕ್ಕಿ ತೋಟಗಳಿಂದ ಕಂಗೊಳಿಸುವ ನೆಲೆ ಸರ್ವ ಧರ್ಮ ಸಮನ್ವಯತೆಯ ಬೀಡಾಗಿದೆ. ಭದ್ರಾ ನದಿಯ ಸಾಂಗತ್ಯದಿಂದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರವು ಅಗಸ್ತ್ಯ ಮಹಾ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಅನ್ನಪೂರ್ಣೇಶ್ವರಿ ದೇವಿಯ ಪ್ರಭಾವದೊಂದಿಗೆ ಅವಿಚ್ಛಿನ್ನ ಪರಂಪರೆಯಾಗಿ ಮುಂದುವರೆದು ಬಂದಿದೆ.

ನಮ್ಮ ಮೂಡಿಗೆರೆ

ಹೊಯ್ಸಳರ ಮೂಲಸ್ಥಾನ ಅಂಗಡಿ

ಹೊಯ್ಸಳರ ಮೂಲಸ್ಥಾನ ಅಂಗಡಿ, ಜಿಲ್ಲೆಯಿಂದ ೫೦ ಕಿ.ಮೀ ತಾಲ್ಲೂಕಿನಿಂದ ೨೦ ಕಿ.ಮೀ. ಮೂಡಿಗೆರೆ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ. ೧೧,೧೨ ನೇ ಶತಮಾನದ ಶಾಸನದಲ್ಲಿ ಇದನ್ನುಸೊಸೆಯೂರು, ಸೊಸೆ ಊರು ಎಂದು ಕರೆದಿದೆ. ಬುಕ್ಕರಾಯನ ಕಾಲದಲ್ಲಿ ೧೩೫೯ ರಲ್ಲಿ ಇದೇ ಹೆಸರಿತ್ತು. ಆದರೆ ಅಚ್ಯುತರಾಯನ ಕಾಲದಲ್ಲಿ ೧೫೩೯ ರ ಹೊತ್ತಿಗೆ ಅಂಗಡಿಯೆಂಬ ಹೆಸರು ಪ್ರಚಾರದಲ್ಲಿತ್ತು. ವಿಷ್ಣುವರ್ಧನನ ಕಾಲದಲ್ಲಿ ಶಶಪುರ ಹಾಗೂ ಶಶಕಪುರ ಎಂಬ ಹೆಸರುಗಳಿವೆ. ಈ ಸೋಸೆಯೂರೆ ಹೊಯ್ಸಳರ ಮೂಲ ಸ್ಥಾನ. ಇಲ್ಲಿ ಸಳನು ಹುಲಿಯನ್ನು ಕೊಂದು ಹೊಯ್ಸಳ ವಂಶದ ಹೆಸರಿಗೆ ಕಾರಣನಾದವನು ಎಂದು ಶಾಸನ ತಿಳಿಸುತ್ತಿದೆ. ನೃಪಕಾಮ ಮಗನಾದ ವಿನಯಾದಿತ್ಯನು ದ್ವಾರಸಮುದ್ರಕ್ಕೆ ತನ್ನ ರಾಜಧಾನಿ (ಈಗಿನ ಹಳೇಬೀಡು) ಬದಲಾಯಿಸಿದನು. ಸಳನ ವಂಶದ ೪ ನೇಯ ರಾಜನೇ ವಿಷ್ಣುವರ್ಧನ ಪ್ರಭಾವಶಾಲಿಯಾಗಿದ್ದ ಹೊಯ್ಸಳರ ಸ್ವತಂತ್ರ ರಾಜ.
ಇಲ್ಲಿ ಸಪ್ತ ಮಾತೃಕೆಗಳಿವೆ. ೫ ವಿಗ್ರಹಗಳು ಮಾತ್ರ ಇಲ್ಲಿವೆ. ಅವುಗಳೆಂದರೆ, ಬ್ರಾಹ್ಮಿಣಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಶ್ವರಿ ಇವುಗಳು. ಇಂದ್ರಾಣಿ ಮತ್ತು ಚಾಮುಂಡಿ ಸೇರಿ ಸಪ್ತ ಮಾತೃಕೆಗಳು ಈ ಭಾಗದಲ್ಲಿ ವಸಂತ ಪರಮೇಶ್ವರ ಅಥವಾ ವೈಷ್ಣವಿ ದೇವಿಯ ಪ್ರಧಾನ ಪೂಜೆ ಹಬ್ಬವಾಗಿದೆ. ಚೈತ್ರ, ವೈಶಾಖ ಮಾಸದಲ್ಲಿ ಸುಗ್ಗಿ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿ ಮುಖ್ಯ ದೇವತೆ ವಸಂತಮ್ಮ ಅಥವಾ ವಾಸಂತಿ ದೇವಿ ಕುಲದೇವತೆಯಾಗಿದೆ.