ಶುಕ್ರವಾರ, ಜುಲೈ 28, 2023

ಭಾನುವಾರ (ಜುಲೈ 30) ಕೊಟ್ಟಿಗೆಹಾರ (ಅತ್ತಿಗೆರೆ)ಯಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ

   ಕೊಟ್ಟಿಗೆಹಾರ: ಚಿಕ್ಕಮಗಳೂರಿನ ಸ್ವಾಭಿಮಾನಿ ಪತ್ರಕರ್ತರ ಜನಪರ ವೇದಿಕೆ 'ಪಬ್ಲಿಕ್ ಇಂಪಾಕ್ಟ್ ' ಖಾಸಗಿ ವಾಹಿನಿ  ವತಿಯಿಂದ ಕೊಟ್ಟಿಗೆಹಾರದ ಅತ್ತಿಗೆರೆಯ ಎ.ಎಸ್.ಅಶ್ವತ್ಥ್ ಅವರ ಗದ್ದೆಯಲ್ಲಿ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಏರ್ಪಡಿಸಲಾಗಿದೆ.
ಪುರುಷರ ಹಗ್ಗಜಗ್ಗಾಟ ಪ್ರಥಮ 10ಸಾವಿರ,ದ್ವಿತೀಯ 5ಸಾವಿರ, ತೃತೀಯ 3ಸಾವಿರ ಹಾಗೂ  ಮಹಿಳೆಯರ ಹಗ್ಗಜಗ್ಗಾಟ ಪ್ರಥಮ ಕ್ರಮವಾಗಿ 10ಸಾವಿರ,5ಸಾವಿರ, 3ಸಾವಿರ ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ  ಕ್ರಮವಾಗಿ 5ಸಾವಿರ,3ಸಾವಿರ,2ಸಾವಿರ ಮತ್ತು  ಮಹಿಳೆಯರ ಥ್ರೋಬಾಲ್ 5ಸಾವಿರ,3ಸಾವಿರ ಹಾಗೂ 2 ಸಾವಿರ.ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ 1ಸಾವಿರ, 500ಹಾಗೂ ತೃತೀಯ 300ರೂ ಬಹುಮಾನ ನೀಡಲಾಗುವುದು.ಆಸಕ್ತರು ಮೊಬೈಲ್ ಸಂಖ್ಯೆ  9148055429/9916917520 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರಾದ ಪ್ರಶಾಂತ್ ಮೂಡಿಗೆರೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸೋಮವಾರ, ಜುಲೈ 10, 2023

ನೂತನ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ.ರಮೇಶ್ ಸಿ ನೇಮಕ

ಕೊಟ್ಟಿಗೆಹಾರ:ಮೂಡಿಗೆರೆ ಪಶು ಆಸ್ಪತ್ರೆಯ ನೂತನ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ. ರಮೇಶ್ ಸಿ ನೇಮಕಗೊಂಡಿದ್ದಾರೆ. 
ಈ ಹಿಂದೆ ಚಿಕ್ಕಮಗಳೂರು ತಾಲ್ಲೂಕಿನ ಕೆಳಗೂರು ಪಶು ಚಿಕಿತ್ಸಾಲಯದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಗಳಾಗಿದ್ದ ಡಾ. ರಮೇಶ್ ಸಿ ಅವರನ್ನು ಮೂಡಿಗೆರೆ ಪಶು ಆಸ್ಪತ್ರೆಗೆ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೆಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಮೂಡಿಗೆರೆ ಪಶು ಆಸ್ಪತ್ರೆಯಲ್ಲಿ ಪ್ರಭಾರ ಮುಖ್ಯ ಪಶು ವೈದ್ಯಾಧಿಕಾರಿಯಾಗಿದ್ದ ಡಾ.ಮನು ಅವರಿಂದ  ಡಾ. ರಮೇಶ್ ಸಿ ಅವರು ಅಧಿಕಾರ ಸ್ವೀಕರಿಸಿದರು. 

ಸೋಮವಾರ, ಮೇ 1, 2023

ತಾಯಿಯ ಅನುಭವ, ನನ್ನ ಕ್ರಿಯಾಶೀಲತೆಯೊಂದಿಗೆ ಕ್ಷೇತ್ರದ ಅಭಿವೃದ್ದಿಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹೇಳಿಕೆ


ಈ ಹಿಂದೆ ಸಚಿವೆಯಾಗಿ, ಕ್ಷೇತ್ರದ ಶಾಸಕಿಯಾಗಿ  ಜನರ ಸೇವೆ ಮಾಡಿದ್ದ ತಾಯಿ ಮೋಟಮ್ಮ ಅವರ ರಾಜಕೀಯ ಅನುಭವ ಮತ್ತು ನನ್ನ ಕ್ರೀಯಾಶೀಲತೆಯೊಂದಿಗೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲು ಕಂಕಣಬದ್ದವಾಗಿದ್ದು ಈ ಬಾರಿ ಮತದಾರರು ಕೈ ಹಿಡಿಯಲಿದ್ದಾರೆ ಎಂದು ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹೇಳಿದರು.
ಸೋಮವಾರ, ಬಣಕಲ್, ಕೊಟ್ಟಿಗೆಹಾರ, ಸಬ್ಬೇನಹಳ್ಳಿ, ಬಂಕೇನಹಳ್ಳಿ, ಚಕ್ಕಮಕ್ಕಿ ಮುಂತಾದ ಕಡೆಗಳಲ್ಲಿ ಮತಯಾಚನೆ ವೇಳೆ ಕೊಟ್ಟಿಗೆಹಾರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಜನರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಅನುಗುಣವಾಗಿ ಸಂಪನ್ಮೂಲವನ್ನು ಕ್ರೋಡಿಕರಿಸಿ ಫಲಾನುಭವಿಗಳಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದಲ್ಲಿ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ನನ್ನ ಮೊದಲ ಕೆಲಸವಾಗಿದೆ. ಮಲೆನಾಡು ಭಾಗದಲ್ಲಿ ಹಲವು ರೈತರ ಸಮಸ್ಯೆಗಳಿದ್ಧು ಅದನ್ನು ಕಾರ್ಯರೂಪಕ್ಕೆ ತರುತ್ತೇನೆ. ಪ್ರತಿಯೊಂದು ಗ್ರಾಮದ  ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತರುವೆ ಗ್ರಾ.ಪಂ ಅಧ್ಯಕ್ಷ ಸತೀಶ್ ಮಾತನಾಡಿ, ಮಾಜಿ ಸಚಿವೆ ಮೋಟಮ್ಮನವರ ಜನಪರ ಕಾರ್ಯಗಳನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ತರುವೆ ಗ್ರಾ.ಪಂಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಂದರೇಶ್‌ಗೌಡ, ಸಬ್ಲಿ ದೇವರಾಜ್,  ಟಿ.ಎ.ಖಾದರ್, ಇರ್ಪಾನ್, ರಾಮಚಂದ್ರೆಗೌಡ, ಸುಬ್ರಹ್ಮಣ್ಯ, ದಿಲ್‌ದಾರ್ ಬೇಗಂ, ಅಜೀಜ್, ಮನು, ಇರ್ಪಾನ್, ಮಹೇಶ್, ಕುಮಾರ್ ಮುಂತಾದವರು ಇದ್ದರು.

ಶೋಷಿತ, ಬಡವರ್ಗದ ಧ್ವನಿಯಾಗಿ ಸಿಪಿಐ ಕಾರ್ಯ ನಿರ್ವಹಣೆ: ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಹೇಳಿಕೆ


ಕೊಟ್ಟಿಗೆಹಾರ:ಹಿಂದಿನಿಂದಲೂ ಶೋಷಿತ ಬಡವರ್ಗದ ಧ್ವನಿಯಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಸಿಪಿಐ ಪಕ್ಷವನ್ನು ಮತದಾರರು ಬೆಂಬಲಿಸಲ್ಲಿದ್ದಾರೆ ಎಂದು ಮೂಡಿಗೆರೆಯ ಸಿಪಿಐ ಪಕ್ಷದ ಅಭ್ಯರ್ಥಿ ರಮೇಶ್ ಕೆಳಗೂರು ಹೇಳಿದರು.
ಕೊಟ್ಟಿಗೆಹಾರದಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸನ ಸಭೆಗೆ ಆಯ್ಕೆಯಾದರೇ ಮೂಡಿಗೆರೆ ಕ್ಷೇತ್ರದ ಎಲ್ಲಾ ಅರ್ಹ ನಿವೇಶನ ಮತ್ತು ವಸತಿ ರಹಿತರಿಗೆ ನಿವೇಶನ ಮತ್ತು ವಸತಿ ಕಲ್ಪಿಸುವುದು ಸರ್ಕಾರಿ ಆಸ್ಪತ್ರೆಯನ್ನು ಉನ್ನತೀಕರಿಸಿ ಎಲ್ಲಾ ಬಡವರಿಗೂ ಕೈಗೆಟುಕುವ  ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದು ಮೊದಲ ಆದ್ಯೆತೆಯಾಗಿದೆ ಎಂದರು.
ಹಲವಾರು ದಶಕಗಳಿಂದ  ಸಿಪಿಐ ಪಕ್ಷ ನೊಂದವರ ಪರವಾಗಿ ಹೋರಾಟ ರೂಪಿಸುತ್ತ ಬಂದಿದೆ. ಮೂಡಿಗೆರೆ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ, ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ, ಕಾಫಿ ಉದ್ಯಮದ ಉನ್ನತಿಗೆ, ತೋಟ ಕಾರ್ಮಿಕರ ಶ್ರೇಯೋಭಿವೃದ್ದಿಗೆ, ಅಸಂಘಟಿತ ಕಾರ್ಮಿಕರ ಹಿತ ಕಾಯಲು, ದಲಿತ, ಹಿಂದುಳಿದ,ಅಲ್ಪಸಂಖ್ಯಾತ, ಮಹಿಳೆಯರ ಬದುಕನ್ನು ಹಸನು ಮಾಡಲು ಸಿಪಿಐ ಕಂಕಣಬದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಮುಖಂಡರಾದ ರಾಜು ಬಾನಳ್ಳಿ, ಅವಿನ್ ಕೊಟ್ಟಿಗೆಹಾರ, ಶಂಕರ್, ವಸಮತ್, ಸುಂದರ್ ಬಾಳೂರು, ರಿ, ರಾಜು, ಲಕ್ಷ್ಮಿ, ಗುಲಾಬಿ, ಯಮುನಾ ಮುಂತಾದವರು ಇದ್ದರು.

ಭಾನುವಾರ, ಏಪ್ರಿಲ್ 30, 2023

ಗ್ರಾಮದ ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ:ನಯನ ಮೋಟಮ್ಮ

ಕೊಟ್ಟಿಗೆಹಾರ: ಕಾಂಗ್ರೆಸ್ ರಾಷ್ಟ್ರೀಯ ಪಕ್ಷಕ್ಕೆ ಬಹು ದೊಡ್ಡ ಇತಿಹಾಸವಿದೆ.ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್.ದೇಶ ಕಟ್ಟಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಬಾಳೂರು ಹೋಬಳಿಯ ಬಾಳೂರು,ಜಾವಳಿ,ಕೂವೆ,ಕಲ್ಮನೆ,ಮಾಳಿಂಗನಾಡು,ಗಬ್ಗಲ್, ನಿಡುವಾಳೆ,ಸುಂಕಸಾಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಪರ ಮತಯಾಚನೆ ಮಾಡಿ ಮಾತನಾಡಿದರು.
ಮತದಾರರಿಗೆ ಸರಿಯಾಗಿ ವಿಮರ್ಶೆ ಮಾಡಿ ಮತದಾನ ಮಾಡಲು ಕಾಲಾವಕಾಶವಿದೆ.ರಸ್ತೆಗಳನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ ಮೋದಿಯವರಲ್ಲ.ನಂತರ ಅವರ ಕಾಲದಲ್ಲಿ ಡಾಂಬರೀಕರಣ ಆಗಿರಬಹುದು.ಹಿರಿಯ ನಾಯಕಿ ಮೋಟಮ್ಮ ಮೂಡಿಗೆರೆ ಕ್ಷೇತ್ರದಲ್ಲಿ ಮೂರು ಬಾರಿ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದಲ್ಲಿ ಸಾಕಷ್ಟು ಗರಿಷ್ಟ ಕೆಲಸವನ್ನು ಮಾಡಿದ್ದಾರೆ.ಅವರ ಪುತ್ರಿ ನಯನಾ ಕೂಡ ಶಿಕ್ಷಿತರಾಗಿದ್ದು  ಕ್ಷೇತ್ರವನ್ನು ಅಬಿವೃದ್ಧಿ ಪಥದಲ್ಲಿ ಸಾಗಿಸುತ್ತಾರೆ ಎಂಬ ಆತ್ಮ ವಿಶ್ವಾಸವಿದೆ.ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದರ ಮೂಲಕ ನಯನಾ ಅವರಿಗೆ ಜನ ಸೇವೆ ಮಾಡಲು ಅವಕಾಶ ನೀಡಬೇಕೆಂದು ವಿನಂತಿಸಿದರು.
ಅಭ್ಯರ್ಥಿ ನಯನಾ ಮೋಟಮ್ಮ ಮಾತನಾಡಿ ' ಜನರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಅನುಗುಣವಾಗಿ ಸಂಪನ್ಮೂಲವನ್ನು ಕ್ರೂಢಿಕರಿಸಿ ಫಲಾನುಭವಿಗಳಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯವಾಗಿದೆ.ಕ್ಷೇತ್ರದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದಲ್ಲಿ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ನನ್ನ ಮೊದಲ ಕೆಲಸವಾಗಿದೆ.ಪ್ರತಿಯೊಂದು ಗ್ರಾಮದ  ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.
ಈ ಸಂದರ್ಭದಲ್ಲಿ ಬಾಳೂರು ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ  ಶ್ರೀನಾಥ್,ಜಿಲ್ಲಾ ವಕ್ತಾರ ಪ್ರಸನ್ನ ಮರಗುಂದ,ಮುಖಂಡರಾದ ಜಿ.ಎಚ್.ಹಾಲಪ್ಪ ಗೌಡ,ಸಬ್ಲಿ ದೇವರಾಜ್,ರವಿ ವಾಟೇಖಾನ್,ಕೆ.ಸಿ.ಮಹೇಂದ್ರ,ಉಪೇಂದ್ರ,ಲಾರೆನ್ಸ್ ಡಿಸೋಜ, ಮಹೇಶ್ ಬಾಳೂರು,ರಿಯಾಜ್, ಜಮೀರ್,ಚಂದ್ರಶೇಖರ್,ಎನ್.ಎಂ.ರವಿ,ಚಂದ್ರು ಕೂವೆ,ಲಕ್ಷ್ಮಣ್,ಮೋಹನ್ ಪಟೇಲ್,ನವೀನ್,ಸಂಜೀವ,ಸ್ವಾಮಿ ಮರ್ಕಲ್  ಮತ್ತಿತರರು ಇದ್ದರು

ಭಾನುವಾರ, ಏಪ್ರಿಲ್ 16, 2023

ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕೊಟ್ಟಿಗೆಹಾರ:ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಇಟ್ಟುಕೊಳ್ಳಲು ಸಾಮಾಜಿಕ ಕಾರ್ಯಗಳು ವೇದಿಕೆಯಾಗಿವೆ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.
ಬಣಕಲ್ ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ವಿಷು ಹಬ್ಬದ ಪ್ರಯುಕ್ತ ಮೂಡಿಗೆರೆ ಎಂಜಿಎಂ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆರೋಗ್ಯಪೂರ್ಣ ಸ್ವಸ್ಥ ಹಾಗೂ ಸದೃಡ ಸಮುದಾಯವನ್ನಾಗಿ ರೂಪಿಸುವುದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ  ಸಂಘದ ಉದ್ದೇಶವಾಗಿದೆ. ಸಮುದಾಯದ ಸರ್ವಾಂಗೀಣ ಅಭಿವೃದ್ದಿಯ ಸಂಘದ ಮೂಲ ಮಂತ್ರವಾಗಿದೆ. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು, ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಂಘಟಿಸುವುದರ ಜೊತೆಗೆ ಸಮುದಾಯದ ಸಬಲೀಕರಣಕ್ಕೆ ಶ್ರಮಿಸುವ ಉದ್ದೇಶವನ್ನು  ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವು ಹೊಂದಿದೆ ಎಂದರು.
ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂಭವಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆಸ್ಪತ್ರೆಯ ಹಿರಿಯ ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಅವರ ಸೇವಾಮನೋಭಾವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಮೂಡಿಗೆರೆ ಎಂಜಿಎಂ ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂಭವಿ, ಶುಶ್ರೂಷಕಿಯರಾದ ವೇದಾವತಿ, ವನಿತಾಕುಮಾರಿ, ಆಸ್ಪತ್ರೆಯ ಸಿಬ್ಬಂದಿಗಳಾದ ನಾಗೇಶ್, ಪ್ರಮೀಳಮ್ಮ, ಜಮೀಲಾಭಾನು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪದಾಧಿಕಾರಿಗಳು, ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ಮಂಗಳವಾರ, ಏಪ್ರಿಲ್ 11, 2023

ಲೇಖಕ ಧನಂಜಯ ಜೀವಾಳ ಅವರ ಪುಸ್ತಕಗಳ ಬಿಡುಗಡೆ

ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಕೃತಿ ಗ್ರಾಮಾಯಣ

ಲೇಖಕ ಧನಂಜಯ ಜೀವಾಳ ಅವರ ಪುಸ್ತಕಗಳ ಬಿಡುಗಡೆ
ಕೊಟ್ಟಿಗೆಹಾರ:ಗ್ರಾಮಾಯಣ ಕೃತಿಯಲ್ಲಿ ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ. ಮಲೆನಾಡಿನ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಈ ಕೃತಿಯಲ್ಲಿ ದಾಖಲಾಗಿದೆ ಎಂದು ಮೈಸೂರಿನ ನಿವೃತ್ತ ಪ್ರಾಂಶುಪಾಲರಾದ ಡಾ.ಭದ್ರಪ್ಪ ಹೇಳಿದರು.

ಬಿದರಹಳ್ಳಿಯಲ್ಲಿ ನಡೆದ ಲೇಖಕ ಧನಂಜಯ ಜೀವಾಳ ಅವರ ಗ್ರಾಮಾಯಣ ಭಾಗ ೧ ಮತ್ತು ೨ ಪುಸ್ತಕ ಹಾಗೂ ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ ಎಂಬ ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವಾನುಭವದ ಸಹಜವಾದ ಸ್ಪಂದನ ಈ ಕೃತಿಯಲ್ಲಿ ಅಕ್ಷರಗಳಾಗಿವೆ. ಮರ‍್ನಾಲ್ಕು ಕಾದಂಬರಿಗಳಿಗಾಗುವಷ್ಟು ವಸ್ತು ವಿಷಯಗಳು ಈ ಕೃತಿಯಲ್ಲಿವೆ. ಗತಿಸಿ ಹೋದ ಮಲೆನಾಡಿನ ಜನಜೀವನ ಸಂಸ್ಕೃತಿಯನ್ನು ದಾಖಲಿಸುವ ಕಾರ್ಯ ಅತ್ಯಂತ ಅಗತ್ಯವಾಗಿ ಆಗಬೇಕಿದೆ. ಆಯಾ ಭಾಗದ ಪ್ರಾದೇಶಿಕ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಲೇಖಕರು ಹಾಗೂ ವಿಮರ್ಶಕರಾದ ಡಾ.ಎಚ್.ಎಸ್. ಸತ್ಯನಾರಾಯಣ ಮಾತನಾಡಿ, ಧನಂಜಯ ಜೀವಾಳ ಅವರು ಗ್ರಾಮಾಯಣ ಕೃತಿಯ ಮೂಲಕ ಮಲೆನಾಡಿನ ಹಿನ್ನಲೆಯ ಗ್ರಾಮ ಭಾರತವನ್ನು ಕಟ್ಟಿಕೊಟ್ಟಿದ್ದಾರೆ. ಗ್ರಾಮ ಸಂಸ್ಕೃತಿಯ ವಿವರಗಳು ಈ ಕೃತಿಯಲ್ಲಿ ದಟ್ಟವಾಗಿದೆ.  ಎಂದರು.
ಲೇಖಕರು ಹಾಗೂ ಸಂಶೋದಕರಾದ  ಪ್ರದೀಪ್ ಕೆಂಜಿಗೆ ಮಾತನಾಡಿ ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕಬೇಕಿದೆ. ಆಡಿಯೋ ಪುಸ್ತಕಗಳು  ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಆಡಿಯೋ ಪುಸ್ತಕಗಳು ಕೂಡ ಪರಿಣಾಮಕಾರಿಯಾಗಿ ಕೇಳುವ ವರ್ಗವನ್ನು ತಲುಪುತ್ತವೆ ಎಂದರು.
ಹಿರಿಯ ಜಾನಪದ ತಜ್ಞರಾದ ಕಾಳೇಗೌಡ ನಾಗವಾರ ಮಾತನಾಡಿದರು.
ಈ ಸಂದರ್ಭದಲ್ಲಿ ಲೇಖಕ ಧನಂಜಯ ಜೀವಾಳ, ಧ್ವನಿ ಕಲಾವಿದರಾದ ಎನ್. ಲೀಲಾವತಿ, ಭಾಗ್ಯ, ವನಜ ಸುರೇಶ್, ಡಾ.ಯತೀಶ್ವರ್, ಮಮತ, ಸಾಹಿತಿಗಳಾದ ಹಳೆಕೋಟೆ ರಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಕಸಾಪ ಪದಾಧಿಕಾರಿಗಳಾದ ಮಗ್ಗಲಮಕ್ಕಿ ಗಣೇಶ್, ಪ್ರಕಾಶ್, ಎಂ.ಎಸ್ ನಾಗರಾಜ್, ಪ್ರಸನ್ನ ಗೌಡಹಳ್ಳಿ, ಮಂಜುನಾಥ್ ಸ್ವಾಮಿ, ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.